ದೊಡ್ಡಬಳ್ಳಾಪುರ: ಸೆ.1ರಿಂದ ನಗರದ ಅಂಚೆ ಕಚೇರಿಯಲ್ಲಿ ಆರಂಭಗೊಳ್ಳಲಿರುವ ಭಾರತೀಯ ಅಂಚೆ ಪಾವತಿ ಬ್ಯಾಂಕ್ ಸೇವೆ ಕುರಿತು ಅರಿವು ಮೂಡಿಸುವ ಜಾಥಾ ಗುರುವಾರ ನಗರದಲ್ಲಿ ನಡೆಯಿತು.
ನಗರದ ಪ್ರಮುಖ ಬೀದಿಗಳಲ್ಲಿ ಕರಪತ್ರ ಹಂಚುವ ಮೂಲಕ ಅಂಚೆ ಪಾವತಿ ಬ್ಯಾಂಕ್ ಸೇವೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಭಾರತೀಯ ಅಂಚೆ ಪಾವತಿ ಬ್ಯಾಂಕ್ನ ವ್ಯವಸ್ಥಾಪಕರಾದ ಗಿರೀಶ್ ಕುಮಾರ್ ಹಾಗೂ ಮಮತಾ ಈ ಕುರಿತು ಮಾಹಿತಿ ನೀಡಿ, ಚನ್ನಪಟ್ಟಣ ವಿಭಾಗದ ದೊಡ್ಡಬಳ್ಳಾಪುರ ಅಂಚೆ ಕಚೇರಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಥಮವಾಗಿ ಭಾರತೀಯ ಅಂಚೆ ಪಾವತಿ ಬ್ಯಾಂಕ್ ಸ್ಥಾಪನೆಯಾಗುತ್ತಿದೆ. ಗ್ರಾಮೀಣ ಪ್ರದೇಶದ ಜನತೆಗೆ ಬ್ಯಾಂಕಿಂಗ್ ಹಾಗೂ ಹಣಕಾಸಿನ ಸೇವೆ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಗ್ರಾಮೀಣ ಅಂಚೆ ಸೇವಕರು ಮತ್ತು ಫೋಸ್ಟ್ಮನ್ಗಳಿಗೆ ಪೇಮೆಂಟ್ಸ್ ಸೇವೆ ನೀಡುವ ಸಾಧನ ನೀಡಲಾಗುತ್ತದೆ. ಹೀಗಾಗಿ ಮನೆ ಬಾಗಿಲಿಗೆ ಬ್ಯಾಂಕ್ ಸೇವೆ, ಡಿಜಿಟಲ್ ಪಾವತಿ ವ್ಯವಸ್ಥೆ ಲಭ್ಯವಾಗಲಿದೆ. ಪೇಮೆಂಟ್ಸ್ ಬ್ಯಾಂಕ್ ಮೂಲಕ ₹1 ಲಕ್ಷ ಪ್ರತಿ ಖಾತೆಯಂತೆ ವೈಯಕ್ತಿಕ ಹಾಗೂ ಸಣ್ಣ ಉದ್ದಿಮೆದಾರರು ಠೇವಣಿ ಇಡಬಹುದಾಗಿದೆ. ಎನ್ಇಎಫ್ಟಿ, ಆರ್ಟಿಜಿಎಸ್, ಯುಪಿಐ ಮತ್ತು ಬಿಲ್ ಪಾವತಿ ಸೇವೆಗಳು ಈ ಎಲ್ಲಾ ಸೇವೆಗಳು ಖಾತೆ ಬಳಕೆದಾರರಿಗೆ ಲಭ್ಯವಾಗಲಿದೆ. ಅಂಚೆ ಇಲಾಖೆ ಪೇಮೆಂಟ್ಸ್ ಬ್ಯಾಂಕ್ ತನ್ನ ಹೊಸ ಚಿಂತನೆಯೊಂದಿಗೆ ಗ್ರಾಹಕರಿಗೆ ತನ್ನ ಸೇವೆ ನೀಡಲು ಮುಂದಾಗಿದೆ.
ಸೆ.1ರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಷ್ಟ್ರಮಟ್ಟದಲ್ಲಿ ಚಾಲನೆಗೊಳ್ಳಲಿದೆ. ದೇಶದಾದ್ಯಂತ ಜಿಲ್ಲೆಗೆ ಒಂದರಂತೆ 650 ಭಾರತೀಯ ಅಂಚೆ ಪಾವತಿ ಬ್ಯಾಂಕ್ ಶಾಖೆಗಳು ಹಾಗೂ 3,250 ಅಂಚೆ ಕಚೇರಿಗಳು ಆರಂಭವಾಗಲಿವೆ. ಡಿಸೆಂಬರ್ ಒಳಗಾಗಿ ದೇಶದಾದ್ಯಂತ 1.55 ಲಕ್ಷ ಅಂಚೆ ಕಚೇರಿಗಳಿಗೆ ವಿಸ್ತರಿಸಲಾಗುತ್ತಿದೆ ಎಂದರು.
ಅಂಚೆ ಕಚೇರಿಯ ಉಪ ಅಧೀಕ್ಷಕ ಶ್ರೀನಿವಾಸ್, ಪೋಸ್ಟ್ ಮಾಸ್ಟರ್ ರಮೇಶಬಾಬು ಹಾಗೂ ಅಂಚೆ ಇಲಾಖೆ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.