ADVERTISEMENT

ಘಾಟಿ ಕ್ಷೇತ್ರದಲ್ಲಿ ಅಂಕುರಾರ್ಪಣೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 13:00 IST
Last Updated 9 ಜನವರಿ 2019, 13:00 IST
ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಅಂಕುರಾರ್ಪಣೆ ಸಂಕೇತವಾಗಿ ಧ್ವಜಾರೋಹಣ ನಡೆಯಿತು
ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಅಂಕುರಾರ್ಪಣೆ ಸಂಕೇತವಾಗಿ ಧ್ವಜಾರೋಹಣ ನಡೆಯಿತು   

ದೊಡ್ಡಬಳ್ಳಾಪುರ:ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿ ಜ.12 ರಂದು ನಡೆಯಲಿರುವ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ಅಂಕುರಾರ್ಪಣೆ ಸೇವಾ ಕಾರ್ಯಕ್ರಮ ದೇವಾಲಯದಲ್ಲಿ ಮಂಗಳವಾರ ರಾತ್ರಿ ಶ್ರದ್ಧಾಭಕ್ತಿಯಿಂದ ನಡೆಯಿತು.

ದೊಡ್ಡಬಳ್ಳಾಪುರದ ದೇವಾಂಗ ಮಂಡಲಿ ಹಾಗೂ ದೇವಾಲಯದ ವತಿಯಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಅಂಕುರಾರ್ಪಣೆಗಾಗಿ ವಿಶೇಷವಾಗಿ ಸಿದ್ಧಪಡಿಸಿದ್ದ ನಾಗದೇವತೆ ರೂಪದ ಸುಬ್ರಹ್ಮಣ್ಯ ಹಾಗೂ ಆಯುಧ ವಾಹನಗಳ ಚಿತ್ರಪಟವಿರುವ ಧ್ವಜಕ್ಕೆ ದೇವಾಲಯದ ಅರ್ಚಕ ವೃಂದದಿಂದ ಪೂಜೆ ಸಲ್ಲಿಸಿ ಧ್ವಜ ಸ್ತಂಭದ ಮೇಲೆ ಪ್ರತಿಷ್ಠಾಪಿಸಲಾಯಿತು. ಭಕ್ತಾದಿಗಳು ಧ್ವಜಕ್ಕೆ ಪುಷ್ಪ ಸಮರ್ಪಣೆ ಮಾಡಿದರು. ನಂತರ ಸುಬ್ರಹ್ಮಣ್ಯಸ್ವಾಮಿಗೆ ಮಹಾಮಂಗಳಾರತಿ ನಡೆಯಿತು.

ಸುಮಾರು 50 ವರ್ಷಗಳಿಂದ ದೊಡ್ಡಬಳ್ಳಾಪುರದ ದೇವಾಂಗ ಸಮುದಾಯ, ದೇವಾಂಗ ಮಂಡಲಿ ನೇತೃತ್ವದಲ್ಲಿ ನಡೆಸಿಕೊಂಡು ಬಂದಿರುವ ಈ ಆಚರಣೆ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವದ ಆರಂಭಿಕ ಕಾರ್ಯಕ್ರಮ ಎಂದೇ ಬಿಂಬಿತವಾಗಿದೆ.

ADVERTISEMENT

ಕಾರ್ಯಕ್ರಮದಲ್ಲಿ ದೇವಾಂಗ ಮಂಡಲಿ ಪ್ರಭಾರ ಅಧ್ಯಕ್ಷ ಕೆ.ಜಿ.ದಿನೇಶ್, ಉಪಾಧ್ಯಕ್ಷ ಚಿಕ್ಕಣ್ಣ, ಕಾರ್ಯದರ್ಶಿ ಎ.ಎಸ್.ಕೇಶವ, ಸಹಕಾರ್ಯದರ್ಶಿ ಯೋಗ ನಟರಾಜ್, ಘಾಟಿ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿ ಗೌರವ ಅಧ್ಯಕ್ಷ ಜಿ.ಎಂ.ಚನ್ನಪ್ಪ, ಅಧ್ಯಕ್ಷ ಜಗನ್ನಾಥಾಚಾರ್, ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಸೇರಿದಂತೆ ದೇವಾಂಗ ಮಂಡಲಿ ಕಾರ್ಯಕಾರಿ ಸಮಿತಿ ಹಾಗೂ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.