ದೇವನಹಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಉಪಲೋಕಾಯುಕ್ತ ಫಣೀಂದ್ರ ಸಾರ್ವಜನಿಕದ ಸಮಸ್ಯೆಯನ್ನು ಆಲಿಸುತ್ತಿರುವುದು.
ದೇವನಹಳ್ಳಿ: ತಾಲ್ಲೂಕು ಆಡಳಿತ ಸೌಧಕ್ಕೆ ಶನಿವಾರ ದಿಢೀರ್ ಭೇಟಿ ಮಾಡಿದ್ದ ಕರ್ನಾಟಕ ರಾಜ್ಯ ಲೋಕಾಯುಕ್ತ ತಂಡ, ತಾಲ್ಲೂಕು ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಪರಿಶೀಲನೆ ನಡೆಸಿದರು.
ತಹಶೀಲ್ದಾರ್ ಕಾರ್ಯಾಲಯದಲ್ಲಿರುವ ನ್ಯಾಯ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರಿಂದ ಬರುವ ಎಲ್ಲ ಮನವಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಿ ನ್ಯಾಯ ಒದಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸರ್ಕಾರವೂ ಸಕಾಲ ಸೇರಿದಂತೆ ಇ-ಆಫೀಶ್ ಜಾರಿ ಮಾಡಿದ್ದು, ಕಚೇರಿಗೆ ಬರುವ ಪ್ರತಿಯೊಂದು ಅರ್ಜಿಗಳನ್ನು ನಿಗದಿತ ತಂತ್ರಾಂಶದಲ್ಲಿಯೇ ನಿರ್ವಹಣೆ ಮಾಡಬೇಕು. ಶ್ರೀ ಸಾಮಾನ್ಯರ, ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು.
ಅಧಿಕಾರಿಗಳ ಪ್ರಮಾಣಿಕತೆ, ಕರ್ತವ್ಯದ ಕುರಿತು ಯಾವುದೇ ರೀತಿಯಲ್ಲಿಯೂ ಲೋಕಾಯುಕ್ತಕ್ಕೆ ದೂರುಗಳೇ ಬರದಂತೆ ಕೆಲಸ ಮಾಡಬೇಕು, ನಿಮ್ಮ ಮುಂದೆ ಬರುವ ಸಮಸ್ಯೆಗಳನ್ನು ಪರಿಹಾರ ಮಾಡಲು ಪೂರ್ಣ ಪ್ರಮಾಣದಲ್ಲಿ ಪ್ರಯತ್ನಿಸಿ, ನಿಮ್ಮ ಅಧಿಕಾರ ವ್ಯಾಪ್ತಿಗೆ ಮೀರಿದ್ದನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಿ ಎಂದು ಸಲಹೆ ನೀಡಿದರು.
ಲೋಕಾಯುಕ್ತರಿಗೆ ಸಾರ್ವಜನಿಕರು ನೇರವಾಗಿ ಬಂದು ದೂರು ನೀಡಬಹುದಾಗಿದೆ. ಸರ್ಕಾರಿ ಕೆಲಸಗಳು ಸಂಬಂಧಪಟ್ಟ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಮಾಡದೇ ಇದ್ದಾಗ ಅಥವಾ ಕರ್ತವ್ಯ ಲೋಪ ಕಂಡು ಬಂದರೆ ಜನರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವಾಗ ಲೋಕಾಯುಕ್ತ ವೆಬ್ಸೈಟ್ನಲ್ಲಿ ಸಿಗುವ ಅರ್ಜಿಯ ನಮೂನೆ ಪಡೆದು ಕ್ರಮಬದ್ಧವಾಗಿ ಅರ್ಜಿ ಸಲ್ಲಿಸಿದರೆ ಶೀಘ್ರವಾಗಿ ಅರ್ಜಿ ವಿಲೇವಾರಿಗೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಶಿವಶಂಕರ್, ತಹಶೀಲ್ದಾರ್ ಶಿವರಾಜ್, ಹಾಗೂ ಅಧಿಕಾರಿ ವರ್ಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.