ದೇವನಹಳ್ಳಿ: ‘ಯಾಂತ್ರಿಕ ಜೀವನವಾಗುತ್ತಿರುವ ಇಂದಿನ ಸ್ಥಿತಿಯಲ್ಲಿ ಪ್ರತಿಯೊಬ್ಬರು ದೈಹಿಕ ಕ್ಷಮತೆ ಕಾಯ್ದುಕೊಂಡರೆ ಮಾತ್ರ ಉತ್ತಮ ಆರೋಗ್ಯದಿಂದ ಇರಲು ಸಾಧ್ಯ’ ಎಂದು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಬಿ.ಕೆ.ಶಿವಪ್ಪ ಹೇಳಿದರು.
ಇಲ್ಲಿನ ಸರ್ಕಾರಿ ಕಿರಿಯ ಕಾಲೇಜು ಆವರಣದಲ್ಲಿ ದೇವನಹಳ್ಳಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಜೇಸಿಐ ಸಂಸ್ಥೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಹ್ಯಾಂಡ್ಬಾಲ್ ಅಸೋಸಿಯೇಷನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಡೆದ 16ನೇ ವರ್ಷದ ಬೇಸಿಗೆ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸ್ಕೌಟ್ಸ್ ಮತ್ತು ಗೈಡ್ಸ್ ಉದ್ದೇಶ ಮಕ್ಕಳಲ್ಲಿ ರಾಷ್ಟ್ರಪ್ರೇಮ, ದೇಶ ಭಕ್ತಿ, ಸಾಮಾಜಿಕ ಸೇವೆ, ಇತರರಿಗೆ ಸಂಕಷ್ಟದಲ್ಲಿ ನೆರವಾಗುವುದಾಗಿದೆ. ಕೆಲವೇ ದಿನಗಳಲ್ಲಿ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಪರಿಸರ ಸಂರಕ್ಷಣೆಗಾಗಿ ವಿವಿಧ ಜಾತಿಯ ಬೀಜದುಂಡೆ ತಯಾರು ಮಾಡಲು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.
ಮರಿಗೌಡ ತೊಟಗಾರಿಕಾ ರಾಜ್ಯ ಪ್ರಶಸ್ತಿ ಪುರಸ್ಕೃತ ರೈತ ಶಿವನಾಪುರ ರಮೇಶ್ ಮಾತನಾಡಿ, ‘ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಜತೆಗೆ ಜಲಮೂಲ ಉಳಿಸಿ ಪರಿಸರ ಸಂರಕ್ಷಣೆಯಂತಹ ಪ್ರಜ್ಞೆಯನ್ನು ಮೂಡಿಸಬೇಕು. ಒಂದೊಂದು ನೀರಿನ ಹನಿಯ ಮೌಲ್ಯ ಮಕ್ಕಳಿಗೆ ಗೊತ್ತಾಗಬೇಕು. ಗುಣಾತ್ಮಕ ಶಿಕ್ಷಣ ಬರಿ ಪಾಠ ಬೋಧನೆಯಿಂದ ಸಾಧ್ಯವಿಲ್ಲ ಪ್ರಕೃತಿಯೊಂದಿಗೆ ಮಾನವನ ಸಂಬಂಧ ಯಾವ ರೀತಿ ಇರಬೇಕು ಎಂಬುದನ್ನು ಮಕ್ಕಳಲ್ಲಿ ಮನನ ಮಾಡಬೇಕು’ ಎಂದು ಹೇಳಿದರು.
ಅಡ್ವೆಂಚರ್ ಅಸೋಸಿಯೇಷನ್ ಅಧ್ಯಕ್ಷ ಶಶಿಧರ್ ಮಾತನಾಡಿದರು. ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಸ್.ಸಿ.ನಾಗರಾಜ್, ಸ್ಕೌಟ್ ಮತ್ತು ಗೈಡ್ಸ್ ತಾಲ್ಲೂಕು ಘಟಕ ಅಧ್ಯಕ್ಷ ಧನಂಜಯ, ಪ್ರಧಾನ ಕಾರ್ಯದರ್ಶಿ ಸೀತಾರಾಮ್, ಉಪಾಧ್ಯಕ್ಷ ಗಣೇಶ್, ಸದಸ್ಯ ಅಜೇಯ್, ವಿವಿಧ ಘಟಕ ಪದಾಧಿಕಾರಿಗಳಾದ ಎ.ಹರ್ಷ, ಡಾ.ಪ್ರಭಾಕರ್, ಟಿ.ಆರ್.ಲೋಕೇಶ್, ಪುಟ್ಟಸ್ವಾಮಿ, ಸಿ.ಎಂ.ವೆಂಕಟೇಶ್, ವತ್ಸಲಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.