ದೊಡ್ಡಬಳ್ಳಾಪುರ: ಪವರ್ ಟಿವಿಪ್ರಸಾರವನ್ನು ಏಕಾಏಕಿ ಸ್ಥಗಿತಗೊಳಿಸಿರುವ ಘಟನೆ ಖಂಡಿಸಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಕರ್ತರ ಕ್ಷೇಮಾಭಿವೃದ್ದಿ ಟ್ರಸ್ಟ್ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು, ಸುದ್ದಿವಾಹಿನಿ ಕಚೇರಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಸುದ್ದಿವಾಹಿನಿಯ ಪ್ರಸಾರವನ್ನು ಸ್ಥಗಿತಗೊಳಿರುವುದು ಸರಿಯಲ್ಲ. ಆ ವಾಹಿನಿಯ ಕೆಲ ವ್ಯಕ್ತಿಗಳ ವಿರುದ್ದ ಕೇಳಿ ಬಂದಿದ್ದ ಆರೋಪಗಳೇನೇ ಇದ್ದರೂ ಒಂದು ಸುದ್ದಿವಾಹಿನಿಯ ಪ್ರಸಾರವನ್ನು ನಿಲ್ಲಿಸುವ ಕೃತ್ಯ ಖಂಡನೀಯ ಎಂದರು.
‘ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿರುವ 250ಕ್ಕೂ ಹೆಚ್ಚು ಪತ್ರಕರ್ತರ ಬದುಕಿನ ಪ್ರಶ್ನೆ ಇದಾಗಿದ್ದು, ಕೂಡಲೇ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಾಂವಿಧಾನಿಕ ನಿಯಮಗಳಡಿ ಸುದ್ದಿವಾಹಿನಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ,ಪತ್ರಕರ್ತರ ಕ್ಷೇಮಾಭಿವೃದ್ದಿ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.