ದೊಡ್ಡಬಳ್ಳಾಪುರ: ರಾಜ್ಯಪಾಲರ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ನಗರದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.
ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಮಾತನಾಡಿ, 'ಜೆಡಿಎಸ್ ಯುವ ಘಟಕದ ಜಿಲ್ಲಾ ಅಧ್ಯಕ್ಷ ಸುನಿಲ್ ಕುಮಾರ್, ನಗರ ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರವಿ, ಸಂವಿಧಾನಬದ್ದವಾಗಿ ಶಾಸಕರು, ಮುಖ್ಯಮಂತ್ರಿಗಳು ಹೊಂದಿರುವ ಅಧಿಕಾರವನ್ನು ರಾಜ್ಯಪಾಲರು ಕಸಿದುಕೊಳ್ಳಲು ಹೊರಟಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇವಿಶ್ವಾಸ ಮತಯಾಚನೆ ಮಾಡುವ ಮೂಲಕ ಸರ್ಕಾರದ ಒಂದು ವರ್ಷದ ಸಾಧನೆ ಹಾಗೂ ಬಿಜೆಪಿ ಮುಖಂಡರು ಮಾಡುತ್ತಿರುವ ಪಿತೂರಿಗಳನ್ನು ನಾಡಿನ ಜನರಿಗೆ ತಿಳಿಸುವುದು ಅಗತ್ಯವಾಗಿದೆ. ಆದರೆ ಬಿಜೆಪಿ ಮುಖಂಡರು ಸತ್ಯಸಂಗತಿಯನ್ನು ಜನರಿಗೆ ತಿಳಿಸಲು ಸಹ ಅವಕಾಶ ನೀಡದಂತೆ ಅಡ್ಡಿಪಡಿಸುತ್ತಿದ್ದಾರೆ.
ರಾಜ್ಯಪಾಲರು ಬಿಜೆಪಿ ಶಾಸಕರ ಸೂಚನೆಯಂತೆ ಕೆಲಸ ಮಾಡುತ್ತಿದ್ದಾರೆ. ಸಂವಿಧಾನವನ್ನು ತಿರುಚುವ ಕೆಲಸ ನಡೆಯುತ್ತಿದೆ. ಶಾಸಕರು ಹೊಂದಿರುವ ಹಕ್ಕಿನ ರಕ್ಷಣೆಗೆ ಪಕ್ಷಾತೀತವಾಗಿ ಎಲ್ಲರು ಹೋರಾಟ ನಡೆಸುವ ಅನಿವಾರ್ಯತೆ ಇದೆ’ ಎಂದರು.
ಶಾಸಕರ ಆಡಳಿತವನ್ನು ಮೊಟುಕುಗೊಳಿಸುವ ಹಾಗೂ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರ ಬಳಕೆಯಾಗುತ್ತಿದೆ. ಹೀಗಾಗಿ ಈ ಕೂಡಲೆ ರಾಜ್ಯಪಾರು ಗುಜರಾತ್ಗೆ ಹಿಂತಿರುಗಬೇಕು ಎಂದು ಆಗ್ರಹಿಸಿ ಗೋ ಬ್ಯಾಕ್ ಗರ್ವನರ್ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಂ.ಬೈರೇಗೌಡ, ಕಸಬಾ ಬ್ಲಾಕ್ ಅಧ್ಯಕ್ಷ ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿಶಶಿಧರ್, ಮುಖಂಡರಾದ ಆರ್.ವಿ.ಗೌಡ, ಕೆ.ಎಸ್.ರವಿಕುಮಾರ್, ಆದಿತ್ಯನಾಗೇಶ್, ಭದ್ರಾಪುರ ಮೋಹನ್, ರಾಜಣ್ಣ, ಡಿ.ಜಿ.ರಾಜಗೋಪಾಲ್,ರಾಜ್ಕುಮಾರ್, ಟಿ.ಡಿ.ಮುನಿಯಪ್ಪ, ಪು.ಮಹೇಶ್, ಕೇಶವನಾಯಕ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.