ದೇವನಹಳ್ಳಿ : ರೇಷ್ಮೆ ಬೆಳೆ ಉಳಿಸಿಕೊಳ್ಳಲು ಮರಕಡ್ಡಿ (ಗುಣಿಪದ್ಧತಿ) ವಿಧಾನ ಸೂಕ್ತ ಎಂದು ತಾಲ್ಲೂಕು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕಿ ಗಾಯಿತ್ರಿ ಹೇಳಿದರು.
ಇಲ್ಲಿನ ಕೆ.ಹೊಸೂರು ಗ್ರಾಮದ ಬಚ್ಚೇಗೌಡರು ನರೇಗಾ ಯೋಜನೆಯಲ್ಲಿ ಬೆಳೆಸಿರುವ ಮರಕಡ್ಡಿ ಪದ್ಧತಿಯ ರೇಷ್ಮೆ ತೋಟ ಪರಿಶೀಲಿಸಿ ಅವರು ಮಾತನಾಡಿದರು.
2019–20ನೇ ಸಾಲಿನಲ್ಲಿ ರೇಷ್ಮೆ ಬೆಳೆ ಉತ್ತೇಜಿಸುವ ಸಲುವಾಗಿ ರೇಷ್ಮೆ ಹೊಸನಾಟಿಗೆ 197 ಮಾನವ ದಿನಗಳು, ಕೂಲಿ ವೆಚ್ಚ ₹ 49.053, ಸಾಮಾಗ್ರಿ ವೆಚ್ಚ ₹ 28,104, ಸೇರಿ ₹ 77,157 ಪ್ರತಿ ಎಕರೆಗೆ ಪ್ರೋತ್ಸಾಹಧನವನ್ನು ರೈತರು ಪಡೆದುಕೊಳ್ಳಬಹುದು.
ರೇಷ್ಮೆ ಹುಳು ಸಾಕಾಣಿಕೆ ಮನೆಗಳ ನಿರ್ಮಾಣಕ್ಕೆ 225 ಚದರಡಿಯಿಂದ ಒಂದು ಸಾವಿರ ಚದರಡಿಯವರೆಗೆ) ಪ್ರೋತ್ಸಾಹಧನ ಸಾಮಾನ್ಯ ರೈತರಿಗೆ ಶೇ 75ರಷ್ಟು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ 90ರಷ್ಟು ನೀಡಲಾಗುತ್ತಿದೆ. ರೇಷ್ಮೆ ಹುಳು ಸಾಕಾಣಿಕೆ ಸಲಕರಣೆಗೆ, ಚಾಕಿ ಸಾಕಾಣಿಕಾ ಕೇಂದ್ರ ನಿರ್ಮಾಣ ಮತ್ತು ನಿರ್ವಹಣೆಗೆ, ಮತ್ತು ಸಲಕರಣೆಗಳಿಗೂ ಇದೆ ಮಾದರಿಯಲ್ಲಿ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದರು.
ತಾಲ್ಲೂಕು ಪಂಚಾಯಿತಿ ಪ್ರಭಾರ ಅಧ್ಯಕ್ಷೆ ನಂದಿನಿ ವೆಂಕಟೇಶ್ ಮಾತನಾಡಿ, ಸಾಲುಕಡ್ಡಿ ರೇಷ್ಮೆ ಬೆಳೆ ಉಳಿಸಿಕೊಳ್ಳಲು ಈ ಬರಗಾಲದಲ್ಲಿ ರೈತರಿಗೆ ಸವಾಲಾಗಿದೆ. ಕಡಿಮೆ ಮಳೆ, ಸರಳ ವಿಧಾನ, ದೀರ್ಘಾವಧಿ ಮರಕಡ್ಡಿ ರೇಷ್ಮೆ ಬೆಳೆಯೇ ಇಂದಿನ ಸ್ಥಿತಿಯಲ್ಲಿ ಸೂಕ್ತ ಎಂದು ಹೇಳಿದರು. ರೇಷ್ಮೆ ಬೆಳೆ ವಿಸ್ತಿರ್ಣಾಧಿಕಾರಿ ಕೆ.ಎನ್.ಶ್ರೀನಿವಾಸಪ್ಪ, ರೇಷ್ಮೆ ವಲಯಾಧಿಕಾರಿಗಳಾದ ಮುನಿರಾಜಪ್ಪ, ಜಗದೀಶ್, ರೇಷ್ಮೆ ತೋಟದ ಮಾಲಿಕ ಬಚ್ಚೇಗೌಡ ಇದ್ದರು .
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.