ADVERTISEMENT

ಕ್ರೀಡೆ ಯುವಜನರನ್ನು ಒಗ್ಗೂಡಿಸಲಿ: ಶರತ್ ಬಚ್ಚೇಗೌಡ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 14:01 IST
Last Updated 2 ನವೆಂಬರ್ 2019, 14:01 IST
ಹೊಸಕೋಟೆಯಲ್ಲಿ ನಡೆದ ರಾಜ್ಯ ಮಟ್ಟದ ಎಸ.ಬಿ.ಜಿ. ಕಬಡ್ಡಿ ಕ್ರೀಡಾ‌ಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಕಿರಣ್ ಬಾಯ್ಸ್ ತಂಡಕ್ಕೆ ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ಸುಬ್ಬರಾಜು ಪ್ರಶಸ್ತಿ ವಿತರಿಸಿದರು
ಹೊಸಕೋಟೆಯಲ್ಲಿ ನಡೆದ ರಾಜ್ಯ ಮಟ್ಟದ ಎಸ.ಬಿ.ಜಿ. ಕಬಡ್ಡಿ ಕ್ರೀಡಾ‌ಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಕಿರಣ್ ಬಾಯ್ಸ್ ತಂಡಕ್ಕೆ ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ಸುಬ್ಬರಾಜು ಪ್ರಶಸ್ತಿ ವಿತರಿಸಿದರು   

ಹೊಸಕೋಟೆ: ‘ನಮ್ಮ ಪ್ರಾಚೀನ ಕ್ರೀಡೆಗಳಲ್ಲಿ ಒಂದಾದ ಕಬಡ್ಡಿ ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಾಗುತ್ತಿದ್ದು ಕ್ರೀಡಾಪಟುಗಳು ಒಗ್ಗಟ್ಟಿನ ಮಂತ್ರದಿಂದ ಉತ್ತಮ ಮನೋಭಾವ ಹೊಂದಬೇಕು ಎಂದು ಬಿಜೆಪಿ ಯುವಮೋರ್ಚಾದ ರಾಜ್ಯ ಕಾರ್ಯದರ್ಶಿ ಶರತ್ ಬಚ್ಚೇಗೌಡ ತಿಳಿಸಿದರು.

ಅವರು ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ರಾಜ್ಯೋತ್ಸವದ ಪ್ರಯುಕ್ತ ನಡೆದ ರಾಜ್ಯ ಮಟ್ಟದ ಎಸ್.ಬಿ.ಜಿ. ಕಪ್ ಕಪ್ ಕಬಡ್ಡಿ ಪಂದ್ಯಾವಳಿಯ ಸಮಾರೋಪದಲ್ಲಿ ಮಾತನಾಡುತ್ತಿದ್ದರು.

ಸದೃಢ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಹಾಗೂ ಯುವಕರು ಕ್ರೀಡೆಯಲ್ಲಿ ಉತ್ತಮವಾಗಿ ಆಡಲು ತಂಡದ ನಾಯಕನ ಸಲಹೆ, ಮಾರ್ಗದರ್ಶನ ಪಡೆಯುತ್ತಾರೆ. ಅದೇ ಮಾದರಿಯಲ್ಲಿ ಜೀವನದ ಹಾದಿಯನ್ನು ಉತ್ತಮಗೊಳಿಸಲು ಉತ್ತಮ ಸಲಹೆ ಹಾಗೂ ಮಾರ್ಗದರ್ಶನ ಪಡೆಯುವುದು ಮುಖ್ಯ ಎಂದರು.

ADVERTISEMENT

ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ ಸುಬ್ಬರಾಜು ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು. ಆದರೆ ಪ್ರತಿಯೊಬ್ಬರೂ ಆಟದಲ್ಲಿ ಗೆಲ್ಲುವ ಛಲದೊಂದಿಗೆ ಆಡಬೇಕು ಎಂದರು.

ಕಿರಣ್ ಬಾಯ್ಸ್ ತಂಡ ಗೆದ್ದು ₹30 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ಪಡೆಯಿತು. ಹೊಸಕೋಟೆ ಬುಲ್ಸ್ ತಂಡ ₹20 ಸಾವಿರ ನಗದು ಬಹುಮಾನ ಮತ್ತು ಟ್ರೋಫಿ ಉಳ್ಳ ದ್ವಿತೀಯ ಬಹುಮಾನ ಗಳಿಸಿತು.

ಭಾರತ ಕಾರ್ಮಿಕ ಭವಿಷ್ಯನಿಧಿ ಸದಸ್ಯ ವಿಜಯಕುಮಾರ್, ದೊಡ್ಡಹುಲ್ಲೂರು ಕಿರಣ್, ನಗರಸಭಾ ಮಾಜಿ ಸದಸ್ಯ ವಿಜಯಕುಮಾರ್ ಹಾಗೂ ಪಂದ್ಯದ ಆಯೋಜಕ ಚೇತನ್ ಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.