ADVERTISEMENT

ಕಾಲುಬಾಯಿ ರೋಗ; ಲಸಿಕೆಯೇ ಪರಿಹಾರ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 12:27 IST
Last Updated 12 ಸೆಪ್ಟೆಂಬರ್ 2019, 12:27 IST
ಶಾಸಕ ನಿಸರ್ಗ ನಾರಾಯಣಸ್ವಾಮಿ ಪಶುಗಳಿಗೆ ಬಾಳೆ ಹಣ್ಣು ತಿನ್ನಿಸುವ ಮೂಲಕ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಶಾಸಕ ನಿಸರ್ಗ ನಾರಾಯಣಸ್ವಾಮಿ ಪಶುಗಳಿಗೆ ಬಾಳೆ ಹಣ್ಣು ತಿನ್ನಿಸುವ ಮೂಲಕ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು   

ಹಾಡೋನಹಳ್ಳಿ (ದೊಡ್ಡಬಳ್ಳಾಪುರ): ದೇಶದಲ್ಲಿ 2025ರ ಒಳಗೆ ಕಾಲುಬಾಯಿ ರೋಗವನ್ನು ನಿಯಂತ್ರಿಸುವುದು ಮತ್ತು 2030ರ ಒಳಗೆ ಸಂಪೂರ್ಣ ನಿರ್ಮೂಲನೆ ಮಾಡುವುದು ಕೇಂದ್ರ ಸರ್ಕಾರದ ಗುರಿ.

‘ಇಲಾಖೆಯಿಂದ ಹಾಕಲಾಗುವ ಎಲ್ಲಾ ಲಸಿಕೆಗಳನ್ನು ರೈತರು ಜಾನುವಾರುಗಳಿಗೆ ಹಾಕಿಸಿದರೆ ಐದು ವರ್ಷಗಳಲ್ಲಿ ಕಂದು ರೋಗ ಮತ್ತು ಕಾಲುಬಾಯಿ ಜ್ವರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು’ ಎಂದು ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎನ್.ಎಸ್.ಬಾಲಚಂದ್ರ ಹೇಳಿದರು.

ತಾಲ್ಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ರೈತರಿಗೆ ಪಶುಪಾಲನೆ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ರಾಷ್ಟ್ರೀಯ ಪಶುರೋಗ ನಿಯಂತ್ರಣ ಹಾಗೂ ಕೃತಕ ಗರ್ಭಧಾರಣೆ ಮತ್ತು ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಗಳ ಯೋಜನೆಯಡಿಯಲ್ಲಿ ಪಶು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದಕ್ಕಾಗಿ ಶೇ 100ರಷ್ಟು ಆರ್ಥಿಕ ಸವಲತ್ತು ಕೇಂದ್ರ ಸರ್ಕಾರವೇ ಭರಿಸುತ್ತದೆ’ ಎಂದರು.

ದೇವನಹಳ್ಳಿ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಜಾನುವಾರುಗಳಲ್ಲಿ ಕಾಲು ಬಾಯಿ ರೋಗ ಪ್ರಮುಖ ರೋಗವಾಗಿದೆ. ಇದರ ನಿರ್ವಹಣೆಗಾಗಿ ರೈತರು ಕಾಲಕಾಲಕ್ಕೆ ಲಸಿಕೆಗಳನ್ನು ಹಾಕಿಸಬೇಕು. ಪಶು ಕೊಟ್ಟಿಗೆಗಳನ್ನು ನಿರ್ವಹಿಸುವ ಕುರಿತು ಪಶು ಇಲಾಖೆ ವೈದ್ಯರು ಹಾಗೂ ತಜ್ಞರ ಸಲಹೆಗಳನ್ನು ಪಾಲಿಸಬೇಕು’ ಎಂದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಜಂಟಿ ನಿರ್ದೇಶಕ ಡಾ.ಪಿ.ಟಿ.ಶ್ರೀನಿವಾಸ್ ಮಾತನಾಡಿ, ‘ಇಲಾಖೆಯಿಂದ ಹಾಕಲಾಗುವ ಎಲ್ಲಾ ಲಸಿಕೆಗಳನ್ನು ಜಾನುವಾರುಗಳಿಗೆ ಹಾಕಿಸಿದರೆ ಐದು ವರ್ಷಗಳಲ್ಲಿ ಕಂದು ರೋಗ ಮತ್ತು ಕಾಲುಬಾಯಿ ಜ್ವರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು. ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಲಸಿಕೆಯ ಬಾಟಲಿಗಳಿಗೆ ಉಷ್ಣಾಂಶವನ್ನು ಸೂಚಿಸಬಲ್ಲ ಸೂಚಕವನ್ನು ಅಳವಡಿಸಲಾಗಿದೆ. ಇದರಿಂದ ಲಸಿಕೆಯ ಗುಣಮಟ್ಟ ಸೂಚಿಸುತ್ತದೆ’ ಎಂದರು.

ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ರಶ್ಮಿ ವಿ.ಮಹೇಶ್, ಪಶು ವೈದ್ಯಕೀಯ ವಿವಿ ಸಹ ಪ್ರಾದ್ಯಾಪಕ ಡಾ.ಬಿ.ಎಂ.ವೀರೇಗೌಡ,ಜಿಲ್ಲಾ ಪಂಚಾಯಿತಿ ಸದಸ್ಯ ಎಚ್. ಅಪ್ಪಯ್ಯ, ಕೃಷಿ ವಿಜ್ಞಾನಿ ಡಾ.ವೆಂಕಟೇಗೌಡ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ ಡಾ. ಸಿ.ಎಸ್.ಅನಿಲ್ ಕುಮಾರ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎ.ಪಿ.ಮಲ್ಲಿಕಾರ್ಜುನಗೌಡ, ವಿಜ್ಞಾನಿ ಡಾ.ಪಿ.ವೀರನಾಗಪ್ಪ,ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಶ್ರೀರಾಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.