ADVERTISEMENT

‘ಇತಿಹಾಸದಲ್ಲಿ ವಾಜಪೇಯಿ ಹೆಸರು ಶಾಶ್ವತ’

ದೇವನಹಳ್ಳಿ ಬಿಜೆಪಿ ವತಿಯಿಂದ ಹೊಸ ಬಸ್ ನಿಲ್ದಾಣದಲ್ಲಿ ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 17:28 IST
Last Updated 25 ಡಿಸೆಂಬರ್ 2018, 17:28 IST
ವಾಜಪೇಯಿ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು
ವಾಜಪೇಯಿ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು   

ದೇವನಹಳ್ಳಿ: ದೇಶದ ಇತಿಹಾಸದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಬಿಜೆಪಿಗೆ ರಾಷ್ಟ್ರದಲ್ಲಿ ಗಟ್ಟಿತಳಪಾಯ ಹಾಕಿದ ವಾಜಪೇಯಿ ಪ್ರಧಾನಿಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಹತ್ತರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಒಂದೆರಡು ಬಾರಿ ಬಹುಮತ ಸಾಬೀತು ಪಡಿಸಲು ವಿಫಲವಾದರೂ ಧೈರ್ಯಗೆಡದೆ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು ಎಂದರು.

ADVERTISEMENT

ವಿರೋಧ ಪಕ್ಷದ ನಾಯಕನಾಗಿಯೂ ಅಡಳಿತ ಪಕ್ಷದವರೊಂದಿಗೆ ಉತ್ತಮ ಗೆಳೆತನ ಬೆಳೆಸಿಕೊಂಡಿದ್ದರು. ಅಧಿವೇಶನಗಳಲ್ಲಿ ತಮ್ಮ ವಾಕ್‌ ಚಾತುರ್ಯದಿಂದ ಆಡಳತ ಪಕ್ಷದವನ್ನು ಗೊಂದಲಕ್ಕೀಡು ಮಾಡುತ್ತಿದ್ದರು. ಅವರ ಸರಳ ವ್ಯಕ್ತಿತ್ವ, ಮಾತಿನ ಶೈಲಿಯಿಂದ ಅಜಾತ ಶತ್ರು ಎಂದೇ ಕರೆಯಲ್ಪಡುತ್ತಿದ್ದರು ಎಂದರು.

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಬಿ.ರಾಜಣ್ಣ ಮಾತನಾಡಿ, ಪೋಖ್ರಾನ್ ಅಣುಬಾಂಬ್ ಪ್ರಾಯೋಗಿಕ ಪರೀಕ್ಷೆಯಿಂದ ಅನೇಕ ರಾಷ್ಟ್ರಗಳು ದೇಶದ ಕಡೆಗೆ ನೋಡುವಂತಾಗಲು ವಾಜಪೇಯಿ ಅವರ ಕಾಳಜಿ ಪ್ರಮುಖ ಕಾರಣ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ರೂವಾರಿ ಆಗಿದ್ದರು. ಪಕ್ಷ, ವ್ಯಕ್ತಿಗಿಂತ ದೇಶ ದೊಡ್ಡದು. ಹಿಂದೂ ರಾಷ್ಟ್ರ ಬಲಿಷ್ಠವಾಗಬೇಕೆಂಬುದು ಅವರ ನಿಲುವು ಆಗಿತ್ತು ಎಂದರು.

ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಎ.ಸಿ.ಗುರುಸ್ವಾಮಿ, ರಾಜ್ಯ ಪರಿಷತ್‌ ಸದಸ್ಯ ದೇ.ಸು.ನಾಗರಾಜ್, ಜಿಲ್ಲಾ ಬಿಜೆಪಿ ಘಟಕ ಉಪಾಧ್ಯಕ್ಷ ಎಚ್.ಎಂ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಅಂಬರೀಷ್, ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ನಾಗರಾಜ್ ಗೌಡ, ಯುವ ಮೋರ್ಚಾ ತಾಲ್ಲೂಕು ಘಟಕ ಅಧ್ಯಕ್ಷ ಅನಂದ್‌ ಗೌಡ, ಟೌನ್ ಬಿಜೆಪಿ ಘಟಕ ಅಧ್ಯಕ್ಷ ನಿಲೇರಿ ಮಂಜುನಾಥ್, ಮುಖಂಡರಾದ ಎ.ವಿ.ನಾರಾಯಣಸ್ವಾಮಿ, ರಾಜ್ ಗೊಪಾಲ್, ಮಾಚಪ್ಪ, ಶಿವಪ್ರಸಾದ್ ಇದ್ದರು.

ಜನ್ಮದಿನಾಚರಣೆ ಅಂಗವಾಗಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.