ದೊಡ್ಡಬಳ್ಳಾಪುರ: ದೇಶದಲ್ಲಿ ಕೋಟ್ಯಂತರ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ನೀಡುವ ಮೂಲಕ ಮಹಿಳೆಯರು ಹೊಗೆಯಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗುವುದು ತಪ್ಪಿದೆ ಎಂದು ಚಿತ್ರನಟಿ ಶ್ರುತಿ ಹೇಳಿದರು.
ಅವರು ನಗರದ ನಂಜುಡೇಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಭಾನುವಾರ ನಡೆದ ಮಹಿಳಾ ಸಮಾವೇಶದಲ್ಲಿ ಮಾತನಾಡಿದರು.
ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿದವರ ವಿರುದ್ಧ ಕಠಿಣ ಶಿಕ್ಷೆಯನ್ನು ನೀಡುವ ನಿರ್ಧಾರಕೈಗೊಳ್ಳುವ ಕಾನೂನು ಜಾರಿಗೊಳಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಹಿಳೆಯರ ಪರ ಕೆಲಸ ಮಾಡಿದ್ದಾರೆ. ಮಹಿಳೆಯರು ಧರ್ಮಾತೀತ ಮತ್ತು ಜಾತ್ಯತೀತವಾಗಿ ಮತ್ತೊಮ್ಮೆ ಮೋದಿಯವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ತಲಾಕ್ನಿಂದ ಬಹುತೇಕ ಮುಸ್ಲಿಂ ಮಹಿಳೆಯರು ತಮ್ಮ ಬದುಕನ್ನು ಕಳೆದುಕೊಳ್ಳತ್ತಿದ್ದರು. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರು ಪ್ರಥಮ ಬಾರಿಗೆ ತಲಾಕ್ ವಿರುದ್ಧ ನಿಂತವರಲ್ಲಿ ವಿಶ್ವದಲ್ಲಿಯೇ ಮೊದಲ ಪ್ರಧಾನ ಮಂತ್ರಿಯಾಗಿದ್ದಾರೆ ಎಂದರು.
ರಾಜ್ಯದಲ್ಲಿ ಚುನಾವಣೆ ಬಂದಾಗ ಮಾತ್ರ ಎತ್ತಿನಹೊಳೆ ನೀರು ಬಂದೇ ಬಿಟ್ಟಿತು ಎಂದು ಜನಗಳನ್ನು ಏಮಾರಿಸುವ ವೀರಪ್ಪಮೊಯಿಲಿ ಅವರ ತಂತ್ರ ಈ ಬಾರಿ ಫಲಿಸುವುದಿಲ್ಲ. ಜನ ಮೋದಿಯನ್ನು ಪ್ರಧಾನ ಮಂತ್ರಿ ಮಾಡುವ ಸಂಕಲ್ಪ ಮಾಡಿ ಆಗಿದೆ. ಹೀಗಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಚ್ಚೇಗೌಡ ಗೆಲುವು ಸಾಧಿಸುವುದು ನಿಶ್ಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಮಾತನಾಡಿ, ಭಾರತವನ್ನು ವಿಶ್ವಮಟ್ಟದಲ್ಲಿ ಉನ್ನತ ಸ್ಥಾನಕ್ಕೆ ಕೊಂಡಯ್ದ ನರೇಂದ್ರಮೋದಿ ಮತ್ತೊಮ್ಮ ಪ್ರಧಾನಿಯಾಗುವಲ್ಲಿ ಜನ ಸಂಕಲ್ಪ ಮಾಡಬೇಕಿದೆ. ಸುಮಾರು 127ಕ್ಕೂ ಹೆಚ್ಚಿನ ಯೋಜನೆಗಳಿಗೆ ನರೇಂದ್ರಮೋದಿ ಅವರು ಮುದ್ರಾ ಯೋಜನೆ ಮೂಲಕ ₹7.25 ಲಕ್ಷ ಕೋಟಿ ಸಾಲವನ್ನು ಶೇ 70ಕ್ಕೂ ಮಹಿಳೆಯರು ಪಡೆದಿದ್ದಾರೆ. ಶೇ 50 ರಷ್ಟು ಇರುವ ಮಹಿಳೆಯರು ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡುವಲ್ಲಿ ಸಂಘಟಿತರಾಗಬೇಕಿದೆ ಎಂದರು.
ಸಮಾವೇಶದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಕಿರಣ ಮಹೇಶ್ವರಿ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸವಿತಾ ಅಶೋಕ್, ರಾಷ್ಟ್ರೀಯ ಪರಿಷತ್ ಸದಸ್ಯ ಜೋ.ನಾ.ಮಲ್ಲಿಕಾರ್ಜುನ್, ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣಾ ಉಸ್ತುವಾರಿ ಸಚ್ಚಿದಾನಂದಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಶಿವಶಂಕರ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಎಂ.ಕೆ.ವತ್ಸಲಾ ಜಗನ್ನಾಥ್, ನಗರಾಧ್ಯಕ್ಷೆ ಗಿರಿಜಾ, ಜಿಲ್ಲಾ ಮುಖಂಡರಾದ ಕಮಲಾ, ರಾಜಮ್ಮ, ದಾಕ್ಷಾಯಿಣಿ, ಜಿಲ್ಲಾ ಯುವ ಮೋರ್ಚಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ಶಿವಶಂಕರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.