ADVERTISEMENT

ಬಾಂಧವ್ಯ ಕುಸಿತ | ಜಾಗತಿಕ ಯುದ್ಧಕ್ಕೆ ನಾಂದಿ: ಪ್ರೊ.ಎ.ಜಿ.ಶ್ರೀಧರ್‌ಬಾಬು

ಹೊಸಕೋಟೆ ಸರ್ಕಾರಿ ಪ್ರಥಮ ಕಾಲೇಜಿನ ಕಾರ್ಯಾಗಾರದಲ್ಲಿ ಕಳವಳ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 5:12 IST
Last Updated 16 ಏಪ್ರಿಲ್ 2024, 5:12 IST
ಹೊಸಕೋಟೆ ನಗರದ ಸರ್ಕಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು
ಹೊಸಕೋಟೆ ನಗರದ ಸರ್ಕಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು   

ಹೊಸಕೋಟೆ: ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಗಳ ನಡುವೆ ಬಾಂಧವ್ಯ ಕುಸಿಯುತ್ತಿದ್ದು, ಜಾಗತಿಕ ಯುದ್ಧಕ್ಕೆ ನಾಂದಿ ಆಗುವ ಸಾಧ್ಯತೆಯೂ ಇದೆ ಎಂದು ಮಂಗಳೂರು ವಿಭಾಗದ ನಿವೃತ್ತ ಜಂಟಿ ನಿರ್ದೇಶಕ ಪ್ರೊ.ಎ.ಜಿ.ಶ್ರೀಧರ್‌ಬಾಬು ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರು ಉತ್ತಮ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಿಂದ ನಡೆದ ‘ಕೌಶಲ್ಯ ಕಲಿಕೆ, ಅಂತರರಾಷ್ಟ್ರೀಯ ಸಂಬಂಧ, ಸಾರ್ವಜನಿಕ ನೀತಿ ಮತ್ತು ಆಧುನಿಕ ಭಾರತದ ಚಿಂತಕರು’ ಎಂಬ ವಿಷಯದ ಮೇಲೆ ಸೋಮವಾರ ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ದೇಶಗಳ ನಡುವೆ ಅತ್ಯುತ್ತಮ ಸಂಬಂಧ ಬೆಸೆಯುವ ಉತ್ತಮ ಪಠ್ಯಗಳ ಕೊರತೆಯು ಕಾಡುತ್ತಿದೆ. ಆದ್ದರಿಂದ ಆ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಹೆಚ್ಚಾಗಿ ನಡೆಸಬೇಕಿದೆ ಎಂದರು.

ADVERTISEMENT

ದೇಶ–ವಿದೇಶ, ರಾಜ್ಯ–ರಾಜ್ಯಗಳ ನಡುವೆ ಉತ್ತಮ ಸಂಬಂಧ ಹಾಗೂ ಮಾನವೀಯ ಸಂಬಂಧ ಬೆಸೆಯುವ ಪಠ್ಯಗಳು ರೂಪುಗೊಳ್ಳಬೇಕಿರುವುದು ಇಂದಿನ ಅವಶ್ಯಕತೆ ಆಗಿದೆ ಎಂದು ಹೇಳಿದರು.

ಮಾನವೀಯ ಸಂಬಂಧಗಳು ಮನುಷ್ಯನನ್ನು ಮತ್ತಷ್ಟು ಗಟ್ಟಿಯಾಗಿ ಬೆಸೆಯಬೇಕಿತ್ತು. ಆದರೆ ಇಂದಿನ ಮಾನವೀಯ ವಿರೋಧಿ ನೀತಿಗಳೇ ಜಗದಗಲ ಪಸರಿಸುತ್ತಿದ್ದು, ಜನರನ್ನು ವಿಘಟಿಸುತ್ತಿದೆ. ಇವೆಲ್ಲವನ್ನು ಮೀರಿ ಮಾನವೀಯ ಸಂಬಂಧ ಬೆಸೆಯಲು ಅನುಕೂಲ ಆಗುವ ಪಠ್ಯಕ್ರಮ ಇಂದಿನ ಮಕ್ಕಳಿಗೆ ಅನಿವಾರ್ಯವಾಗಿದೆ. ಇದಕ್ಕೆ ವಿಶ್ವವಿದ್ಯಾಲಯಗಳು ಮುಂದಾಗಬೇಕು ಎಂದು ತಿಳಿಸಿದರು.

ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ವೈ.ಸುರೇಂದ್ರಕುಮಾರ್ ಮಾತನಾಡಿದರು.

ಪ್ರಾಂಶುಪಾಲ ಪ್ರೊ.ಮುನಿನಾರಾಯಣಪ್ಪ, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ವೀರಣ್ಣ, ಪ್ರೊ.ಪದ್ಮಕುಮಾರಿ ಚಿಕ್ಕಬಳ್ಳಾಪುರ, ಪ್ರೊ.ಭಾರತೀ ಶಾಮರಾಜ್ ದೊಡ್ಡಬಳ್ಳಾಪುರ, ಪ್ರೊ.ಶಿವಲಿಂಗಯ್ಯ, ಪ್ರೊ.ಕೃಷ್ಣಪ್ಪ ಗುಡಿಬಂಡೆ, ಪ್ರೊ.ಎಸ್.ಎಂ.ವೆಂಕಟೇಶಪ್ಪ ಶ್ರೀನಿವಸಪುರ, ಪ್ರೊ.ಅಮೀರ್ ಪಾಷಾ, ಪ್ರೊ.ಮೀನಾಕ್ಷಿ ಕೆಜಿಎಪ್, ಪ್ರೊ.ಅನಂತಮೂರ್ತಿ ಕೋಲಾರ, ಪ್ರೊ.ಕವಾಲಯ್ಯ, ಶ್ರೀನಿವಾಸ್ ಆಚಾರ್, ಶ್ರೀನಿವಾಸಪ್ಪ, ದ್ಯಾವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.