ADVERTISEMENT

‘ಈಡೇರಿಲ್ಲ ಕೆರೆ ಹೂಳೆತ್ತುವ ಭರವಸೆ’

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 9:28 IST
Last Updated 27 ಫೆಬ್ರುವರಿ 2018, 9:28 IST

ಚನ್ನಮ್ಮನ ಕಿತ್ತೂರು: ‘ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ ಕೆರೆಗಳ ಹೂಳೆತ್ತಲಾಗುವುದು ಎಂದು ಹೋದ ವರ್ಷ ಆ ಪಕ್ಷದ ನಾಯಕರೊಬ್ಬರು ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ’ ಎಂದು ಜೆಡಿಎಸ್ ಮುಖಂಡ ಶಿವನಸಿಂಗ್ ಮೊಕಾಶಿ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಿತ್ತೂರು-ಬೈಲಹೊಂಗಲ ಮಾರ್ಗದಲ್ಲಿ
ಬರುವ ಚಿಕ್ಕನಂದಿಹಳ್ಳಿ ವ್ಯಾಪ್ತಿಯ ಹೊಸಕೇರಿ ಕೆರೆ ಹೂಳೆತ್ತುವ ಕಾಮಗಾರಿಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಚಾಲನೆ ನೀಡಿದ್ದರು. ಆಗ ಹೊಸದಾಗಿ ಪಕ್ಷ ಸೇರಿದ್ದ ಹನುಮಂತ ಕೊಟಬಾಗಿ, ಸ್ವಂತ ವೆಚ್ಚದಲ್ಲಿ 10 ಕೆರೆಗಳ ಹೂಳೆತ್ತಿಸುವುದಾಗಿ ಘೋಷಿಸಿದ್ದರು. ಆದರೆ, ಈ ಭರವಸೆ ಈಡೇರಿಲ್ಲ. ಇಂತಹ ನಾಯಕರ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು’ ಎಂದರು.

‘ಹೊಸಕೇರಿ ಕೆರೆಯಲ್ಲೂ ಸಂಪೂರ್ಣವಾಗಿ ಹೂಳೆತ್ತಿಲ್ಲ. 2–3 ದಿನದಲ್ಲೇ ಕಾಮಗಾರಿ ಸ್ಥಗಿತಗೊಳಿಸಿದರು. ಇದರಿಂದಾಗಿ ಉದ್ಯೋಗ ಖಾತ್ರಿ ಕೂಲಿಕಾರರಿಗೂ ಸಮರ್ಪಕ ಕೆಲಸ ಸಿಗದಂತಾಯಿತು’ ಎಂದು ದೂರಿದರು.

ADVERTISEMENT

‘ಪ್ರಧಾನಿ ಮೋದಿ ಅವರಿಗೆ ರೈತರ ಸಂಕಷ್ಟ ಅರ್ಥವಾಗುವುದಿಲ್ಲ. ನೀರಾವರಿ ಯೋಜನೆ ರೂಪಿಸಲು ಹೆಚ್ಚು ಗಮನಹರಿಸುತ್ತಿಲ್ಲ. ಕೇವಲ ಭಾಷಣಕ್ಕೆ ಅವರ ಮಾತುಗಳು ಸೀಮಿತವಾಗಿವೆ’ ಎಂದು ಟೀಕಿಸಿದರು.‌ ಮುಖಂಡರಾದ ಬಸಪ್ಪ ಆಡೀನ, ಮಡಿವಾಳೆಪ್ಪ ಉಳ್ಳೇಗಡ್ಡಿ ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.