ADVERTISEMENT

ಕಬ್ಬು ಬೆಳೆಗಾರರ ಹಿತ ರಕ್ಷಣೆಗೆ ಸರ್ಕಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 8:37 IST
Last Updated 16 ಸೆಪ್ಟೆಂಬರ್ 2013, 8:37 IST

ಚಿಕ್ಕೋಡಿ: ‘ರಾಜ್ಯ ಸರ್ಕಾರ ಬಜೆಟ್‌ ನಲ್ಲಿ ಸಕ್ಕರೆ ಮಾರಾಟದ ಮೇಲೆ ಶೇ 1ರಷ್ಟು ವಿಧಿಸಿರುವ ಮೌಲ್ಯವರ್ಧಿತ  ರಿತ ತೆರಿಗೆ (ವ್ಯಾಟ್‌)ಯಿಂದ ಸಕ್ಕರೆ ಕಾರ್ಖಾ ನೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರ ಕೂಡಲೇ ತೆರಿಗೆ ವಿಧಿಸುವ ಕ್ರಮವನ್ನು ಹಿಂದಕ್ಕೆ ಪಡೆದರೆ ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಬೆಳೆಗಾರರ ಹಿತ ಕಾಪಾಡಿ ದಂತಾಗುತ್ತದೆ’ ಎಂದು ಇಲ್ಲಿನ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಮೀತ್‌ ಪ್ರಭಾಕರ ಕೋರೆ ಹೇಳಿದರು.

ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ 45 ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಖಾನೆಯು ಕೇವಲ 5500 ಟಿಸಿಡಿ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿತ್ತು. ಸುಮಾರು ರೂ.14 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರ ಜ್ಞಾನದೊಂದಿಗೆ 6500 ಟಿಸಿಡಿಯಿಂದ 7000 ಟಿಸಿಡಿ ಕಬ್ಬು ನುರಿಸುವ ಸಾಮರ್ಥ್ಯಕ್ಕೆ ವಿಸ್ತರಿಸಲಾಗುವುದು.

ಕಾರ್ಖಾನೆಯು ರೈತ ಸದಸ್ಯರ ಹಿತದೃಷ್ಟಿಯಿಂದ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ರೈತರೂ ಪ್ರತಿ ಎಕರೆಯಲ್ಲಿ 100 ಟನ್‌ಗಳಷ್ಟು ಕಬ್ಬು ಬೆಳೆಸುವ ನಿಟ್ಟಿನಲ್ಲಿ ಕೃಷಿ ಕೈಗೊಳ್ಳಬೇಕು ಎಂದು ಕರೆ ನೀಡಿದರು.

ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ ಮಾತನಾಡಿ, ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿವೆ. ತರಕಾರಿಗಳೂ ಬಂಗಾರದ ಬೆಲೆಗೆ ಮಾರಾಟವಾಗುತ್ತಿವೆ. ಆದರೆ, ಸಕ್ಕರೆ ದರ ಮಾತ್ರ ಕನಿಷ್ಠವಾಗಿಯೇ ಇದೆ. ಪ್ರತಿ ಕೆ.ಜಿ ಸಕ್ಕರೆ ಕನಿಷ್ಠ ರೂ.50ಕ್ಕೆ ಮಾರಾಟವಾದರೆ ಸಕ್ಕರೆ ಉದ್ಯಮ ದಿಂದ ಕಾರ್ಖಾನೆಗಳು ಮತ್ತು ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಮತ್ತು  ರಾಜ್ಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ಅಧ್ಯಕ್ಷ ಅಶೋಕ ಪಾಟೀಲ ಮಾತನಾಡಿದರು. ನಿರ್ದೇಶಕರಾದ ಅಣ್ಣಾಸಾಹೇಬ ಜೊಲ್ಲೆ, ಅಜೀತ ದೇಸಾಯಿ, ಎಸ್‌. ಎನ್‌.ಸಪ್ತಸಾಗರ, ಪ್ರಕಾಶ ಪಾಟೀಲ, ಮಲ್ಲಿಕಾರ್ಜುನ ಕೋರೆ, ಸುಭಾಷ ಕಾತ್ರಾಳೆ, ಸಂದೀಪ ಪಾಟೀಲ, ಮಹಾವೀರ ಮಿರಜಿ, ಬಾಳಗೌಡ ರೇಂದಾಳೆ, ಪರಸಗೌಡ ಪಾಟೀಲ, ತಾತ್ಯಾಸಾಬ ಕಾಟೆ, ಮಾಜಿ ಅಧ್ಯಕ್ಷ ಜಿನ್ನಪ್ಪ ಚೌಗಲೆ, ಈರಗೌಡ ಪಾಟೀಲ ಉಪಸ್ಥಿತರಿದ್ದರು. ಉಪಾಧ್ಯಕ್ಷ ಭರತೇಶ ಬನವಣೆ ಸ್ವಾಗತಿಸಿದರು. ಕಾರ್ಮಿಕ ಕಲ್ಯಾಣಾಧಿಕಾರಿ ಎಸ್.ಎಲ್‌. ಹಕಾರೆ ನಿರೂಪಿಸಿದರು. ಸಂಚಾಲಕ ಕೆ.ಕೆ. ಮೈಶಾಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT