ADVERTISEMENT

ಕಾದ್ರೊಳ್ಳಿ: ಕಾಲರಾ ಪೀಡಿತ ಗ್ರಾಮ- ಡಿಸಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2013, 12:36 IST
Last Updated 7 ಜುಲೈ 2013, 12:36 IST

ಬೆಳಗಾವಿ: ಬೈಲಹೊಂಗಲ ತಾಲ್ಲೂಕಿನ ಹುಣಶೀಕಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕಾದ್ರೊಳ್ಳಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಕಾಲರಾ ಪೀಡಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಎನ್.ಜಯರಾಂ ಆದೇಶ ಹೊರಡಿಸಿದ್ದಾರೆ.

ಕಾಲರಾ ರೋಗವನ್ನು ನಿಯಂತ್ರಿಸಲು ಈ ಆದೇಶವನ್ನು ಹೊರಡಿಸಲಾಗಿದ್ದು, ಅದೇಶದ ಅನ್ವಯ ಈ ಕೆಳಗಿನಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅವರು ಸೂಚಿಸಿದ್ದಾರೆ.

ಕಾದ್ರೊಳ್ಳಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕುಡಿಯುವ ನೀರನ್ನು ಕುದಿಸಿ ಆರಿಸಿ ಕುಡಿಯಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕತ್ತರಿಸಿಟ್ಟ ಹಣ್ಣು-ಹಂಪಲಗಳನ್ನು ಮಾರಾಟ ಮಾಡದಂತೆ ನಿಷೇಧಿಸಲಾಗಿದೆ. ಗ್ರಾಮ ಪಂಚಾಯತಿ ಹಾಗೂ ಆರೋಗ್ಯ ಇಲಾಖೆಯವರು ಗ್ರಾಮೀಣ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಜಾತ್ರೆ, ಸಂತೆ ಹಾಗೂ ಸಭೆ-ಸಮಾರಂಭಗಳನ್ನು ನಿಷೇಧಿಸಲಾಗಿದೆ.

ಪ್ರತಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ತಂಡಗಳನ್ನು ರಚಿಸಿ ಕ್ರಮಕೈಗೊಳ್ಳಬೇಕು. ಹೊಟೇಲ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕರಿದ ಪದಾರ್ಥಗಳನ್ನು  ಮಾರಾಟ ಮಾಡಬಾರದು. ಹೊಟೇಲ್, ಖಾನಾವಳಿ ಮತ್ತು ಸಾರ್ವಜಿನಿಕ ಸ್ಥಳಗಳಲ್ಲಿ ಕುಡಿಯಲು ಕುದಿಸಿ ಆರಿಸಿದ ನೀರನ್ನು ಪೂರೈಸಬೇಕು. ಯಾವುದೇ ತಿಂಡಿ ಪದಾರ್ಥಗಳನ್ನು ತೆರೆದಿಡಬಾರದು.

ಮಾಂಸ ಮಾರಾಟ ಮಾಡುವದನ್ನು ನಿಷೇಧಿಸಿದೆ. ಈ ವಿಷಯದ ಬಗ್ಗೆ ಗ್ರಾಮ ಪಂಚಾಯಿತಿಯವರು ಗ್ರಾಮದಲ್ಲಿ ಡಂಗುರ ಸಾರಿ ಎಲ್ಲ ಮುನ್ನೆಚ್ಚೆರಿಕೆ ಕ್ರಮಗಳನ್ನು ಜರುಗಿಸಿ ರೋಗವನ್ನು ನಿಯಂತ್ರಣಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.