ಚಿಂಚಲಿ (ರಾಯಬಾಗ): `ಸಮಾಜದಲ್ಲಿನ ದೇವದಾಸಿಯಂತಹ ಅನಿಷ್ಟ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಿದೆ. ಯಾರ ಒತ್ತಡಕ್ಕೂ ಮಣಿಯದೆ ಮುತ್ತು ಕಟ್ಟಿಸಿಕೊಳ್ಳುವಂತಹ ಹೀನ ಕಾರ್ಯಕ್ಕೆ ಮಹಿಳೆಯರು ಬಲಿಯಾಗದೆ ಸಬಲರಾಗಿ ಸಮಾಜದಲ್ಲಿ ತಲೆ ಎತ್ತಿ ತಿರುಗುವಂತೆ ಆಗಬೇಕು~ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಯೋಜನಾಧಿಕಾರಿ ಎಂ.ಕೆ.ಕುಲಕರ್ಣಿ ಹೇಳಿದರು.
ಅವರು ಶುಕ್ರವಾರ ಗ್ರಾಮದಲ್ಲಿ ಏರ್ಪಡಿಸಿದ್ದ ದೇವದಾಸಿ ನಿರ್ಮೂಲನಾ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.
`ಸರಕಾರ ದೇವದಾಸಿಯರಿಗೆ ಪುನರ್ವಸತಿ ಸೌಕರ್ಯ ನೀಡುತ್ತಿದ್ದು, ಪ್ರತಿ ತಿಂಗಳು ಮಾಸಾಶನವನ್ನು ಸಹ ನೀಡುತ್ತದೆ. ಅಲ್ಲದೆ ಅವರು ಅರ್ಥಿಕವಾಗಿ ಸಬಲರಾಗಲು ಕಿರು ಸಾಲದ ಯೋಜನೆ ಯನ್ನು ಸಹ ಜಾರಿಗೆ ತಂದಿದೆ. ಫೆಬ್ರುವರಿ ಕೊನೆಯ ವಾರದಲ್ಲಿ ತಾಲ್ಲೂಕು ಮಟ್ಟದ ದೇವದಾಸಿಯರ ಸಮ್ಮೇಳನ ಮಾಡಿ ತಾಲ್ಲೂಕಿನಲ್ಲಿ ಇನ್ನುಳಿದ 40 ಜನ ದೇವದಾಸಿಯರಿಗೆ ಮಂಜೂರಾದ ಮಾಸಾಶನ ಆದೇಶ ಪತ್ರಗಳನ್ನು ನೀಡಲಾಗುವುದು~ ಎಂದರು.
ಡಿ.ಎಸ್.ಪಿ.ಎಚ್.ಎನ್.ಅಮರಾಪುರ ಮಾತನಾಡಿ, ದೇವದಾಸಿ ಪದ್ಧತಿ ನಿರ್ಮೂ ಲನೆಗೆ ಇಲಾಖೆಯಿಂದ ಬೇಕಾದ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಿ.ಡಿ.ಪಿ.ಒ ಎಸ್.ಎಚ್. ಪೂಜಾರ, ಜಿಲ್ಲಾ ಕೌಟುಂಬಿಕ ಸಲಹೆಗಾರ ಲೋಕೇಶ, ಅಂಗನವಾಡಿ ಮೇಲ್ವಿಚಾರಕರು. ಕಾರ್ಯಕರ್ತೆಯರು, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುರೇಖಾ ನಾಂದಣಿ ಮತ್ತಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.