ADVERTISEMENT

ನಾಗಲೋಟಿಮಠ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 10:20 IST
Last Updated 9 ಅಕ್ಟೋಬರ್ 2012, 10:20 IST

ಬೆಳಗಾವಿ: `ಪ್ರಶಸ್ತಿ, ಸನ್ಮಾನಗಳು ಸಾಧನೆ ಮಾಡಿರುವ ವ್ಯಕ್ತಿಯ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಇನ್ನಷ್ಟು ಶ್ರಮಿಸಬೇಕಾಗಿದೆ~ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಹೇಳಿದರು.

ಡಾ. ಸ.ಜ. ನಾಗಲೋಟಿಮಠ ಅಂತರರಾಷ್ಟ್ರೀಯ ಪ್ರತಿಷ್ಠಾನ ಹಾಗೂ ರಾಜೀವ ಯುವ ಗ್ರಾಮೀಣಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಗರದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ. ಸ.ಜ. ನಾಗಲೋಟಿಮಠ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

`ಸಮಾಜಕ್ಕಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಪ್ರಶಸ್ತಿಗಳು ಲಭಿಸಿದಾಗ ಇನ್ನಷ್ಟು ಹೆಚ್ಚು ಸಮಾಜಮುಖಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಅವರನ್ನು ಪ್ರೋತ್ಸಾಹಿಸುತ್ತದೆ. ಹುಟ್ಟಿದ ವ್ಯಕ್ತಿಗೆ ಉಸಿರು ಇರುತ್ತದೆಯೇ ಹೊರತು, ಹೆಸರು ಇರುವುದಿಲ್ಲ. ಆ ವ್ಯಕ್ತಿ ಸತ್ತಾಗ ಹೆಸರು ಬರುತ್ತದೆ. ಆದರೆ ಆಗ ಉಸಿರು ನಿಂತಿರುತ್ತದೆ. ಹೀಗಾಗಿ ನಾವು ಬದುಕಿದ್ದಾಗಲೇ ಸಾಧನೆಯನ್ನು ಮಾಡಬೇಕು~ ಎಂದು ಅವರು ಸಲಹೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ದಿನಕರ ಶೆಟ್ಟಿ, `ಶಿಕ್ಷಕರಾದವರು ಶಿಕ್ಷಕ ವೃತ್ತಿಯಿಂದ ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆ ಹೊರತು, ಸಂಘಟನೆಯಿಂದ ಅಲ್ಲ~ ಎಂದು ಅಭಿಪ್ರಾಯಪಟ್ಟರು.

ಹುಕ್ಕೇರಿಯ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬನಹಟ್ಟಿಯ ಮಕ್ಕಳ ಸಂಗಮದ ಅಧ್ಯಕ್ಷ ಪ್ರೊ. ಜಯವಂತ ಕಾಡದೇವರ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ಸಂಜಯ ನಾಗಲೋಟಿಮಠ, ಪ್ರದೀಪ ಬೂಸನೂರಮಠ ಮತ್ತಿತರರು ಹಾಜರಿದ್ದರು. ರಾಜೀವ ಯುವ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಎಫ್. ದೊಡಗೌಡರ ಸ್ವಾಗತಿಸಿದರು. ಶಿವಲೀಲಾ ಪೂಜಾರ ಮತ್ತು ಹೇಮಲತಾ ಕುಲಕರ್ಣಿ ನಿರೂಪಿಸಿದರು. ರಾಜಶೇಖರ ಪಾಟೀಲ ವಂದಿಸಿದರು.

ಸಮಾರಂಭದಲ್ಲಿ 6 ಜನರಿಗೆ ರಾಜ್ಯ ಮಟ್ಟದ ಆದರ್ಶ ಶಿಕ್ಷಕರು, 15 ಜನರಿಗೆ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕರು ಹಾಗೂ 1 ರಾಜ್ಯ ಉತ್ತಮ ತಾಂತ್ರಿಕ ಲೇಖನ ಮತ್ತು ಒಂದು ರಾಜ್ಯ ಮಟ್ಟದ ವೈದ್ಯಕೀಯ ಲೇಖನಕ್ಕೆ ಪ್ರಶಸ್ತಿಯನ್ನು ನೀಡಿ ಸತ್ಕರಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.