ಬೈಲಹೊಂಗಲ: ಭಾರತೀಯ ನಾರಿಯರ ಸ್ವಾಭಿಮಾನ ಹಾಗೂ ಕೆಚ್ಚೆದೆಯನ್ನು ಜಗತ್ತಿಗೆ ಪರಿಚಯಿಸಿದ ಖ್ಯಾತಿ ಕಿತ್ತೂರ ನಾಡಿಗೆ ಸಲ್ಲುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಹೇಳಿದರು. ಎ.ವಿ.ಢಮ್ಮಣಗಿ ಶಿಕ್ಷಣ ಸಂಸ್ಥೆಯ ಕಲ್ಪವೃಕ್ಷ ಮಾಡೆಲ್ ಶಾಲೆಯ ವಾರ್ಷಿಕ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಗಂಡುಮೆಟ್ಟಿನ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಇಲ್ಲಿ, ಮಹಿಳೆಯರೂ ಶೂರತನದಲ್ಲಿ ಮುಂದೆ ಇದ್ದಾರೆ ಎಂಬುದನ್ನು ಕಿತ್ತೂರ ಚೆನ್ನಮ್ಮಾಜಿ ತೋರಿಸಿದ್ದಾರೆ. ಆ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು.ಸಂಗೊಳ್ಳಿ ರಾಯಣ್ಣ ಸೇರಿದಂತೆ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ ಎಂದರು.
ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ ಖೇಣಿ ಮುಖ್ಯ ಅತಿಥಿಯಾಗಿದ್ದರು.‘ಅನಕ್ಷರತೆಯನ್ನು ನಿರ್ಮೂಲನೆ ಮಾಡುವುದರ ಜೊತೆಗೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸಂಸ್ಕೃತಿ ಸಂರಕ್ಷಣೆ ಮಾಡುವಲ್ಲಿ ಯುವ ಜನಾಂಗದ ಪಾತ್ರ ಮುಖ್ಯ’ ಎಂದ ಅವರು, ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಬೇಕೆಂದು ಸಲಹೆ ನೀಡಿದರು.
ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಮಾತನಾಡಿ, ಮಕ್ಕಳ ಭಾವನೆಗಳಿಗೆ ಪಾಲಕರು ಸ್ಪಂದಿಸಿ ಪ್ರೋತ್ಸಾಹ ನೀಡಬೇಕು ಎಂದರು. ನಮ್ಮತನವನ್ನು ಬೆಳೆಸುವುದರ ಜೊತೆಗೆ ಸಾಮಾಜಿಕ ಕಳಕಳಿ ಬೆಳೆಸುವ ಸಂಬಂಧ ಮಕ್ಕಳಿಗೆ ತಿಳಿವಳಿಕೆ ನೀಡಬೇಕು ಎಂದು ಅವರು ಹೇಳಿದರು. ಕಾರ್ಯಾಧ್ಯಕ್ಷೆ ಮಂಗಲಾ ಢಮ್ಮಣಗಿ ಅಧ್ಯಕ್ಷತೆ ವಹಿಸಿದ್ದರು.ಶ್ರೀಮತಿ ಬಿದರಿ ಹಾಗೂ ಪ್ರಾಚಾರ್ಯ ಅರಿಂಧಮರಾಯ್ ಚೌಧರಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.