ADVERTISEMENT

ಬಿಲ್ ಪಾವತಿಸದ ಎಂಜಿನಿಯರ್ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 7:30 IST
Last Updated 11 ಅಕ್ಟೋಬರ್ 2011, 7:30 IST

ಬೆಳಗಾವಿ: ವಿಶ್ವ ಕನ್ನಡ ಸಮ್ಮೇಳನದ ಬಿಲ್ ಪಾವತಿಸಿಲ್ಲ ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಎಂ.ಜೆ. ಪರಮಾಜ ಮೇಲೆ ಗುತ್ತಿಗೆದಾರರು ಹಲ್ಲೆ ನಡೆಸಿ, ಕೆಲಕಾಲ ಕೂಡಿ ಹಾಕಿದ ಘಟನೆ ಸೋಮವಾರ ನಡೆಯಿತು.

ಮುಖ್ಯಮಂತ್ರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ನಡೆಸಿ, ಹೊರ ನಡೆದ ಕೆಲವೇ ನಿಮಿಷಗಳ ನಂತರ ಅದೇ ಸಭಾಂಗಣದಲ್ಲಿ ಈ ಘಟನೆ ನಡೆಯಿತು. ವಿಶ್ವ ಕನ್ನಡ ಸಮ್ಮೇಳನ ಒಳಗಡೆ ಮುಗಿಸಬೇಕು ಎಂದು ಅವಸರ, ಅವಸರವಾಗಿ ಕಾಮಗಾರಿ ಮಾಡಿಸಿಕೊಳ್ಳಲಾಯಿತು. ಆದರೆ ಕಾಮಗಾರಿ ಪೂರ್ಣಗೊಂಡು ಎಂಟು ತಿಂಗಳಾದರೂ ಬಿಲ್ ಪಾವತಿಸಿಲ್ಲ. ಕೂಡಲೇ ಬಿಲ್ ಪಾವತಿಸಬೇಕು ಎಂದು ಆಗ್ರಹಿಸಿದರು.

ಕುಂಟು ನೆಪಗಳನ್ನು ಹೇಳಲಾಗುತ್ತಿದೆ. ಇಂದು ಬಿಲ್ ಪಾವರಿಸುವವರೆಗೂ ಹೊರಗಡೆ ಬಿಡುವುದಿಲ್ಲ ಎಂದು ಸಭಾಂಗಣದ ಬಾಗಿಲು ಹಾಕಿದರು.

ಜಿಲ್ಲಾಧಿಕಾರಿಗಳನ್ನು ಕೇಳಿದರೆ ಜಿ.ಪಂ. ಸಿಇಓ ಹೆಸರು ಸೂಚಿಸುತ್ತಾರೆ. ಸಿಇಓ ಅವರನ್ನು ಕೇಳಿದರೆ ಅಧಿಕಾರಿಗಳಿಂದ ವರದಿ ಬಂದಿಲ್ಲ ಎನ್ನುತ್ತಾರೆ. ಸಾಲ ಮಾಡಿ ಕಾಮಗಾರಿ ಮಾಡಿದ್ದೇವೆ. ಇಂದಿಗೂ ಬಿಲ್ ಪಾವತಿಸಿಲ್ಲ ಎಂದು ದೂರಿದರು.

`ನಾನು ಬಿಲ್ ಪಾವತಿಸಲು ಬರುವುದಿಲ್ಲ. ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ~ ಎಂದು ಪರಮಾಜ ಹೇಳಿದರು.

ಆದರೆ ಒಪ್ಪಲಿಲ್ಲ. ಈ ಹಂತದಲ್ಲಿ ತೀವ್ರ ಮಾತಿನ ಚಕಮಕಿ ನಡೆಯಿತು. ಆಗ ಮಧ್ಯಪ್ರವೇಶಿಸಿದ ಪೊಲೀಸರು, ಇಬ್ಬರನ್ನೂ ಸಮಾಧಾನಪಡಿಸಿ ಕಳುಹಿಸಿದರು. ಆಗಲೂ ಗಾಂಧಿ ಭವನಕ್ಕೆ ಪರಮಾಜ ಅವರನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳನ್ನೇ ಕೇಳುವುದಾಗಿ ಅಧಿಕಾರಿಯನ್ನು ಕರೆದುಕೊಂಡು ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.