ಗೋಕಾಕ: `ಜಾತಿ ವಿಷ ಬೀಜ ಬಿತ್ತಿ ರಾಜಕಾರಣ ಮಾಡುತ್ತಿರುವ ಎದುರಾಳಿಗಳಿಗೆ ಈ ಚುನಾವಣೆಯಲ್ಲಿ (ತಾ.ಪಂ) ಗೆಲ್ಲುವ ಮೂಲಕ ಅವರ ತಂತ್ರಗಾರಿಕೆಯನ್ನು ನಿರ್ನಾಮ ಮಾಡಿದ್ದೇನೆ~ ಎಂದು ಸಚಿವ ಬಾಲಚಂದ್ರ ಜಾರಕಿಹೊಳಿ ಗುಡುಗಿದರು.
ಇಲ್ಲಿಯ ತಾ.ಪಂ. ಸಭಾ ಭವನದಲ್ಲಿ ಶನಿವಾರ ನಡೆದ ಗೋಕಾಕ ತಾ.ಪಂ. ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಾನು ಬಿಜೆಪಿಯಲ್ಲಿಯೇ ಇರುತ್ತೇನೆ. ಯಾವುದೇ ಕಾರಣಕ್ಕೂ ಬೇರೆ ಪಕ್ಷ ಸೇರುವುದಿಲ್ಲ ಎಂದ ಅವರು ತಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಾಲ್ಲೂಕಿನ ಹಿತದೃಷ್ಟಿಯಿಂದ ನಮ್ಮ ಗುಂಪು ಅಧಿಕಾರಕ್ಕೆ ಬರುವ ಮೂಲಕ ಮತ್ತೇ ಆಡಳಿತ ಚುಕ್ಕಾಣಿ ಹಿಡಿದಿದೆ.
ಕಳೆದ ಬಾರಿ ಚುನಾವಣೆಯಲ್ಲಿ ಕೇವಲ ಒಂದು ಮತದ ಅಂತರದಲ್ಲಿ ಸೋತಿದ್ದ ನಾವು ಈಗ ಅಧಿಕಾರ ಹಿಡಿಯುವುದರ ಮೂಲಕ ಹಿಂದಿನ ಸೇಡನ್ನು ತೀರಿಸಿಕೊಂಡಿದ್ದೇವೆ ಎಂದರು. ಅಧಿಕಾರ ಯಾವತ್ತೂ ಶಾಶ್ವತವಲ್ಲ. ಅಧಿಕಾರ ಇದ್ದಾಗ ಜನರ ಸೇವೆ ಮಾಡುವ ಇಚ್ಛಾಶಕ್ತಿಯನ್ನು ಜನಪ್ರತಿನಿಧಿಗಳು ಮೈಗೂಡಿಸಿಕೊಳ್ಳಬೇಕು. ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ನಮ್ಮ ಕುಟುಂಬ ಬದ್ಧವಿದೆ. ನಂಬಿದವರನ್ನು ಎಂದಿಗೂ ಕೈಬಿಡುವುದಿಲ್ಲ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ನ ಕೆಲ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.