ಚಿಕ್ಕೋಡಿ: ತಾಲ್ಲೂಕಿನ ಕರಗಾಂವ ಗ್ರಾಮದ ಬೀರದೇವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಜಾತ್ರೆಯ ಪ್ರಯುಕ್ತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಅ.21 ರಂದು ಬೀರದೇವರ ಪಲ್ಲಕ್ಕಿಯು ಆರತಿ ಮತ್ತು ವಾದ್ಯಗಳೊಂದಿಗೆ ಗ್ರಾಮ ಪ್ರವೇಶಿಸಿತು. ಅಂದು ರಾತ್ರಿ ಗ್ರಾಮದ ಕಮತೆ ಕುಟುಂಬದವರು ಭಕ್ತಾದಿಗಳಿಗೆ ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸಿದ್ದರು. ರಾತ್ರಿ ಕರಗಾಂವದ ಜಡಿಸಿದ್ದೇಶ್ವರ ನಾಟ್ಯ ಸಂಘದ ಕಲಾವಿದರು ‘ಶ್ರೀಮಂತರ ದರ್ಪಕ್ಕೆ ಸಿಡಿದೆದ್ದ ಬಡವ’ ನಾಟಕ ಪ್ರದರ್ಶಿಸಿದರು.
22 ರಂದು ಬೀರದೇವರ ಪಲ್ಲಕ್ಕಿಯು ಭಕ್ತರ ಮನೆ ಮನೆಗೆ ಹೋಗಿ ನೈವೇದ್ಯ ಸ್ವೀಕರಿಸಿತು. ಸಂಜೆ ವಾದ್ಯ ಮೇಳಗಳೊಂದಿಗೆ ಕಬ್ಬಿನ ಮೆರವಣಿಗೆ ನಡೆಯಿತು. 23ರಂದು ಮಧ್ಯಾಹ್ನ ಪಲ್ಲಕ್ಕಿಯು ಮಂದಿರ ಪ್ರವೇಶಿಸಿದ ಸಂದರ್ಭದಲ್ಲಿ ಭಕ್ತಾದಿಗಳು ಪಲ್ಲಕ್ಕಿ ಮೇಲೆ ಭಂಡಾರ, ಉತ್ತತ್ತಿ, ಹೂವು, ಕೊಬ್ಬರಿ ಹಾರಿಸಿ ಭಕ್ತಿ ಸೇವೆ ಸಲ್ಲಿಸಿದರು.
ಸಂಜೆ ಜಂಗೀ ನಿಕಾಲಿ ಕುಸ್ತಿ ಹಾಗೂ ರಾತ್ರಿ ಲೋಕಾಪುರದ ಕಲಾವಿದರಿಂದ ಶ್ರೀಕೃಷ್ಣ ಪಾರಿಜಾತ ಪ್ರದರ್ಶನ ನಡೆಯಿತು. ಕರಗಾಂವ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಜನ ಭಕ್ತಾದಿಗಳು ಜಾತ್ರೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.