ADVERTISEMENT

‘ಶಿಕ್ಷಣ ಜೊತೆ ಜೀವನದ ಮೌಲ್ಯ ಅಳವಡಿಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 9:30 IST
Last Updated 23 ಡಿಸೆಂಬರ್ 2013, 9:30 IST

ಚನ್ನಮ್ಮನ ಕಿತ್ತೂರು: ‘ಶಿಸ್ತು, ಪ್ರತಿಭೆ, ಧೈರ್ಯ ಮತ್ತು ಸಾಹಸದ ಜೊತೆಗೆ ವಿದ್ಯಾರ್ಥಿಗಳು ಜೀವನಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಕಿಮ್ಮನೆ ರತ್ನಾಕರ ಅಭಿಪ್ರಾಯಪಟ್ಟರು.

ಅವರು ಭಾನುವಾರ ಸ್ಥಳೀಯ ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಬಾಲ­ಕಿ­ಯರ ವಸತಿ ಸೈನಿಕ ಶಾಲೆಯ ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾನುವಾರ ಅವರು ಮಾತನಾಡಿದರು.

‘ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅವಿಷ್ಕಾರ­ಗಳು ಆಗಿವೆ. ವಿಜ್ಞಾನ ಅಗಾಧ ಪ್ರಮಾ­ಣ­ದಲ್ಲಿ ಬೆಳೆದಿದೆ. ಆದರೆ ಹಿಂದಿನ ಹಿರಿ­ಯರ ಆದರ್ಶ ಮತ್ತು ಮೌಲ್ಯಗಳು ಮಾಯ­ವಾಗುತ್ತಿವೆ’ ಎಂದು ವಿಷಾದಿಸಿದರು.

‘ಹಿಂದೂ, ಬೌದ್ಧ, ಸಿಖ್‌ ಮತ್ತು ಜೈನ್‌ ಧರ್ಮಕ್ಕೆ ಜನ್ಮ ನೀಡಿದ್ದು ಭಾರತ. ಇಲ್ಲಿ ಎಲ್ಲ ಧರ್ಮ, ಜಾತಿ ಮತ್ತು ಭಾಷೆಯ ಜನರನ್ನು ಒಟ್ಟಾಗಿ ತೆಗೆದು­ಕೊಂಡು ಹೋಗುವುದು ಪ್ರತಿ ಭಾರತೀ­ಯನ ಕರ್ತವ್ಯ. ಇದಕ್ಕೆ ಪೂರಕ­ವಾದ ಕಾರ್ಯಕ್ರಮಗಳು ಶಿಕ್ಷಣ ಸಂಸ್ಥೆ­ಗ­ಳಿಂದ ನಡೆಯಲು ಸಾಧ್ಯ’ ಎಂದು ನುಡಿದರು.

‘ಈ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ ಮಾಜಿ ಶಿಕ್ಷಣ ಸಚಿವ ಎಸ್‌. ಆರ್‌. ಕಂಠಿ ಹಾಗೂ ಬೆಳವಣಿಗೆಗೆ ಕಾಣಿಕೆ ನೀಡಿದ ಬಿ.ಡಿ.ಜತ್ತಿ ಅವರ ಪ್ರಯತ್ನದಿಂದ ನಿರೀಕ್ಷೆ ಮೀರಿ ಇದು ಬೆಳೆದಿದೆ. ವಿದ್ಯಾರ್ಥಿ­ಗಳು ಇವರಂಥ ಅನೇಕ ಹಿರಿಯರ ಪುಸ್ತಕಗ­ಳನ್ನು ಓದಬೇಕು. ಅವರ ಆದರ್ಶಗ­ಳನ್ನು ಮೈಗೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳೂ ಆದರ್ಶ ಪುರುಷರ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕೆಲಸ ಮಾಡಬೇಕು’ ಎಂದು ಸಚಿವರು ಸಲಹೆ ಇತ್ತರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸಮಿತಿ ಅಧ್ಯಕ್ಷೆ ಡಾ. ಸರೋಜಿನಿ ಶಿಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಮಹೇಂದ್ರ ಕಂಠಿ, ಸದಸ್ಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕೌಜಲಗಿ, ಪ್ರಾಚಾರ್ಯ ನಿವೃತ್ತ ಲೆಫ್ಟಿನಂಟ್‌ ಕರ್ನಲ್‌ ಪ್ರಕಾಶ ನರಹರಿ, ಕಾಲೇಜು ಶಿಕ್ಷಣ ನಿರ್ದೇಶಕಿ ಮಮತಾ ನರಹರಿ ವೇದಿಕೆಯಲ್ಲಿದ್ದರು.
ಕೆಡೆಟ್‌ ಅಭಾರಾಣಿ ಜವಳಿ ಸ್ವಾಗತಿ­ಸಿದರು. ಕೆಡೆಟ್‌ ಸಂಜನಾ ಅಂಗಡಿ ನಿರೂಪಿಸಿದರು. ಶಾಲಾ ನಾಯಕಿ ಕೆಡೆಟ್‌ ಸನಾ ಶೇಖ್‌ ವಂದಿಸಿದರು.

ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದಕ್ಕೂ ಪೂರ್ವದಲ್ಲಿ ಪಥ ಸಂಚಲನ ಹಾಗೂ ಕ್ಷೇತ್ರ ಚಟುವಟಿಕೆಗಳನ್ನು ವೀಕ್ಷಿಸಿದ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.