ADVERTISEMENT

‘ಇನ್ನೂ ಎರಡು ಕೆರೆಗೆ ಸದ್ಯದಲ್ಲೇ ನೀರು’

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 8:45 IST
Last Updated 7 ಜನವರಿ 2018, 8:45 IST
ಚಿಕ್ಕೋಡಿ ತಾಲ್ಲೂಕಿನ ಚಿಂಚಣಿ ಗ್ರಾಮ ಪರಿಮಿತಿಯಲ್ಲಿ ನಿಪ್ಪಾಣಿ–ಮುಧೋಳ ರಾಜ್ಯ ಹೆದ್ದಾರಿಯಿಂದ ಚನ್ಯಾನದಡ್ಡಿವರೆಗೆ ಕೂಡು ರಸ್ತೆ ನಿರ್ಮಾಣ ಕಾಮಗಾರಿಗೆ ಸಂಸದ ಪ್ರಕಾಶ ಹುಕ್ಕೇರಿ ಚಾಲನೆ ನೀಡಿದರು
ಚಿಕ್ಕೋಡಿ ತಾಲ್ಲೂಕಿನ ಚಿಂಚಣಿ ಗ್ರಾಮ ಪರಿಮಿತಿಯಲ್ಲಿ ನಿಪ್ಪಾಣಿ–ಮುಧೋಳ ರಾಜ್ಯ ಹೆದ್ದಾರಿಯಿಂದ ಚನ್ಯಾನದಡ್ಡಿವರೆಗೆ ಕೂಡು ರಸ್ತೆ ನಿರ್ಮಾಣ ಕಾಮಗಾರಿಗೆ ಸಂಸದ ಪ್ರಕಾಶ ಹುಕ್ಕೇರಿ ಚಾಲನೆ ನೀಡಿದರು   

ಚಿಕ್ಕೋಡಿ: ‘ಚಿಕ್ಕೋಡಿ–ಸದಲಗಾ ವಿಧಾನಸಭೆ ಕ್ಷೇತ್ರದಿಂದ ಗಣೇಶ ಹುಕ್ಕೇರಿ ಶಾಸಕರಾಗಿ ಆಯ್ಕೆಯಾದ ಬಳಿಕ ಗಂಗಾ ಕಲ್ಯಾಣ ಯೋಜನೆಯಡಿ 58 ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, 6300ಕ್ಕೂ ಹೆಚ್ಚು ಎಕರೆ ಭೂಮಿ ನೀರಾವರಿಗೆ ಒಳಪಟ್ಟಿದೆ ಎಂದು ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು.

ಚಿಕ್ಕೋಡಿ–ಸದಲಗಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಶನಿವಾರ ರಾಂಪುರ ಗ್ರಾಮದಲ್ಲಿ ಶ್ರೀ ಗಣೇಶ ಯಾತ ನೀರಾವರಿ ಯೋಜನೆಗೆ ಉದ್ಘಾಟನೆ, ಚಿಂಚಣಿ ಗ್ರಾಮದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಮತ್ತು ಗ್ರಂಥಾಲಯ ಇಲಾಖೆಯಿಂದ ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಗ್ರಂಥಾಲಯ ಉದ್ಘಾಟನೆ, ₹15 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಗರಡಿ ಮನೆ ನಿರ್ಮಾಣ ಕಾಮಗಾರಿ ಮತ್ತು ಚಿಂಚಣಿ ಗ್ರಾಮ ಪರಿಮಿತಿಯಲ್ಲಿ ಎನ್‌–ಎಂ.ರಸ್ತೆಯಿಂದ ಚನ್ಯಾನದಡ್ಡಿವರೆಗೆ ಕೂಡು ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಅಲ್ಲದೇ, ಕ್ಷೇತ್ರ ವ್ಯಾಪ್ತಿಯಲ್ಲಿ ಐದಾರು ಕೆರೆಗಳಿಗೆ ನೀರು ತುಂಬಿಸಲಾಗುತ್ತಿದ್ದು, ಇನ್ನೂ 2 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ಪಡೆಯಲಾಗಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ರೈತರಿಂದ ನಯಾಪೈಸೆಯನ್ನೂ ಪಡೆಯದೇ ಗಂಗಾ ಕಲ್ಯಾಣ ಯೋಜನೆಯಡಿ ಏತ ನೀರಾವರಿ ಮೂಲಕ ನದಿಗಳಿಗೆ ಒಣಭೂಮಿಗಳಿಗೆ ನೀರಾವರಿ ಸೌಕರ್ಯ ಕಲ್ಪಿಸಿ ರೈತರ ಬದುಕು ಹಸನು ಮಾಡಲು ಪ್ರಯತ್ನಿಸಲಾಗುತ್ತಿದೆ. ನದಿಗಳಿಂದ ಪೈಪ್‌ಲೈನ್‌, ಪೈಪ್‌, ವಿದ್ಯುತ್‌ ಮೋಟಾರ್, ವಿದ್ಯುತ್‌ ಸಂಪರ್ಕ ಮೊದಲಾದ ವ್ಯವಸ್ಥೆಯನ್ನು ಸರ್ಕಾರದಿಂದ ಸಂಪೂರ್ಣವಾಗಿ ಉಚಿತವಾಗಿಯೇ ಮಾಡಲಾಗುತ್ತಿದೆ ಎಂದರು.

ರಾಂಪುರ ಗ್ರಾಮದಲ್ಲಿ ಈಗಾಗಲೇ ಎರಡು ಗಂಗಾ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಿ 200 ಎಕರೆಗೆ ನೀರಾವರಿ ಸೌಕರ್ಯ ಕಲ್ಪಿಸಲಾಗಿದೆ. ಇದೀಗ ₹1.25 ಕೋಟಿ ವೆಚ್ಚದಲ್ಲಿ 47 ರೈತರಿಗೆ ಸೇರಿದ 100 ಎಕರೆ ಜಮೀನಿಗೆ ನೀರಾವರಿ ಸೌಕರ್ಯ ಕಲ್ಪಿಸಲಾಗಿದೆ’ ಎಂದು ಹೇಳಿದರು.

‘ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಿರುವ 58 ಏತ ನೀರಾವರಿ ಯೋಜನೆಗಳಿಗೆ ನಿರಂತರ ತ್ರಿಫೇಸ್‌ ವಿದ್ಯುತ್‌ ಸರಬರಾಜು ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಚಿಂಚಣಿ ಗ್ರಾಮ ಪರಿಮಿತಿಯಲ್ಲಿ ನಿಪ್ಪಾಣಿ–ಮುಧೋಳ ರಾಜ್ಯ ಹೆದ್ದಾರಿಯಿಂದ ಚನ್ಯಾನದಡ್ಡಿವರೆಗೆ ಲೋಕೋಪಯೋಗಿ ಇಲಾಖೆಯಿಂದ ₹90 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದು ಪ್ರಕಾಶ ಹುಕ್ಕೇರಿ ಹೇಳಿದರು.

ಶಾಸಕ ಗಣೇಶ ಹುಕ್ಕೇರಿ, ಚಿಂಚಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅರುಣ ಕರೆಪ್ಪಗೋಳ, ರಾಂಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಾಣಿಕ ಪಾಟೀಲ, ನಿಪ್ಪಾಣಿ ನಗರಸಭೆ ಅಧ್ಯಕ್ಷ ವಿಲಾಸ ಗಾಡಿವಡ್ಡರ, ಪಟ್ಟಣಕುಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿನೋದ ಕಾಗೆ, ವಿಜಯ ಪಾಟೀಲ, ತಾತ್ಯಾಸಾಹೇಬ ಬಂಕಾಪುರೆ, ಮಲಗೌಡ ಪಾಟೀಲ, ಗೋಪಾಲ ಪವಾರ, ಅನಿಲ ಪಾಟೀಲ, ವಿವೇಕ್ ಪಾಟೀಲ, ಭೀಮಾ ಖಂಚನಾಳೆ, ರವಿ ಕರವೆ ಉಪಸ್ಥಿತರಿದ್ದರು.

* * 

ಕ್ಷೇತ್ರದಲ್ಲಿ ಇರುವ 58 ಏತ ನೀರಾವರಿ ಯೋಜನೆಗಳಿಗೆ ನಿರಂತರ ತ್ರಿಫೇಸ್‌ ವಿದ್ಯುತ್‌ ಸರಬರಾಜು ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
ಪ್ರಕಾಶ ಹುಕ್ಕೇರಿ
ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.