ರಾಮದುರ್ಗ: ‘ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಿರಬೇಕು. ಸತತವಾಗಿ ಕ್ರಿಯಾಶೀಲರಾಗಿರಬೇಕು’ ಎಂದು ಬೆಳಗಾವಿಯ ಸಹಕಾರ ತರಬೇತಿ ಅಧಿಕಾರಿ ಶ್ರೀಶೈಲ ಯಡಹಳ್ಳಿ ಹೇಳಿದರು.
ಪಟ್ಟಣದ ಸಿ.ಎಸ್.ಬೆಂಬಳಗಿ ಕಾಲೇಜಿನ ಸಮಾಜ ವಿಜ್ಞಾನ ಸಂಘ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಜರುಗಿದ ಸಮಾಜ ವಿಜ್ಞಾನ ವಿಷಯಗಳ ಮಹತ್ವ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳಿಗೆ ಕಲಿಯಲು ವಯೋಮಿತಿ ಇಲ್ಲ. ಮನಸ್ಸು, ಇಚ್ಛಾಶಕ್ತಿ ಇದ್ದರೆ ಮಾತ್ರ ಉನ್ನತ ಗುರಿ ತಲುಪಲು ಸಾಧ್ಯ. ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರವು ಮಹತ್ವದ್ದಾಗಿದೆ. ಹೆಚ್ಚು ಪುಸ್ತಕಗಳನ್ನು ಓದುವಂತಹ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪಿ.ಬಿ. ತೆಗ್ಗಿಹಳ್ಳಿ ಮಾತನಾಡಿ, ‘ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಸಮಾಜದ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದರು.
ಐಕ್ಯೂಎಸಿ ಸಂಯೋಜಕ ಡಾ.ಎಚ್.ಪಿ. ಹಾಲೊಳ್ಳಿ ಸ್ವಾಗತಿಸಿದರು. ಎಸ್.ಬಿ. ಆಲಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಮಖಾನಾ ಉಪಾಧ್ಯಕ್ಷ ಎಸ್.ಐ. ಮಳಗಲಿ, ಡಾ. ಜಿ.ಬಿ. ಮುರಗೋಡ, ಡಾ.ಪಿ.ಪಿ. ಮೈಸಲಗೆ, ಡಿ.ಎಚ್. ಪಾಟೀಲ, ಎಸ್.ಎನ್. ಮುಷ್ಟಿಗೇರಿ, ಎ.ಡಿ. ಹೊರಟ್ಟಿ ಇದ್ದರು. ಪವಿತ್ರಾ ಕಾಟಕರ ಕಾರ್ಯಕ್ರಮ ನಿರೂಪಿಸಿದರು. ಹನಮಂತ ಚನ್ನದಾಸರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.