ಮೂಡಲಗಿ: ‘ಮದ್ಯ ಸೇವನೆಯಂತ ದುಶ್ಚಟಗಳಿಂದ ಮುಕ್ತವಾಗಿದ್ದರೆ ಕುಟುಂಬವು ಶಾಂತಿ, ನೆಮ್ಮದಿಯೊಂದಿಗೆ ಜೀವನ ಸುಂದರವಾಗಿರುತ್ತದೆ’ ಎಂದು ನಾಗನೂರದ ಜಗದ್ಗುರು ರೇಣುಕಾಚಾರ್ಯ ಶಿವಲಿಂಗ ಆಶ್ರಮದ ಕಾವ್ಯಶ್ರೀ ಅಮ್ಮನವರು ಹೇಳಿದರು.
ತಾಲ್ಲೂಕಿನ ಮಸಗುಪ್ಪಿ ಗ್ರಾಮದ ಮಹಾಲಕ್ಷ್ಮೀದೇವಿ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭವೃದ್ಧಿ ಸಂಸ್ಥೆಯವರಿಂದ ಆಯೋಜಿಸಿರುವ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮನುಷ್ಯ ತನ್ನ ಬದುಕಿನುದ್ದಕ್ಕೂ ಸರಳತೆ ಮತ್ತು ಸುಸಂಸ್ಕೃತವಾಗಿ ಬಾಳುವ ಮೂಲಕ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಭುಜನ್ನವರ ಶಿಬಿರವನ್ನು ಉದ್ಘಾಟಿಸಿ, ‘ಮದ್ಯ ಸೇವನೆಗಾಗಿ ಖರ್ಚು ಮಾಡುವ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಬಳಸಿರಿ, ಮಕ್ಕಳ ಉತ್ತಮ ಭವಿಷ್ಯವನ್ನು ನಿರ್ಮಿಸಬೇಕು’ ಎಂದು ಕಿವಿಮಾತು ಹೇಳಿದರು.
ಶಿಬಿರದ ಯೋಜನಾಧಿಕಾರಿ ಭಾಸ್ಕರ್ ಎನ್. ಪ್ರಾಸ್ತಾವಿಕವಾಗಿ ಮಾತನಾಡಿ, ‘ಇದು 1941ನೇ ಶಿಬಿರವಾಗಿದ್ದು, ಧರ್ಮಸ್ಥಳ ಸಂಸ್ಥೆಯಿಂದ ರಾಜ್ಯದ ವಿವಿಧೆಡೆಯಲ್ಲಿ ಮದ್ಯವರ್ಜನ ಶಿಬಿರಗಳು ಯಶಸ್ಸಾಗಿವೆ’ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕಿ ನಾಗರತ್ನಾ ಹೆಗಡೆ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಶಿವಲೀಲಾ ಗಾಣಿಗೇರ, ಸುರ್ವಣಾ ಪೂರ್ವಿಮಠ, ಸಂಜು ಹೊಸಕೋಟಿ, ಭರಮಪ್ಪ ಗಂಗಣ್ಣವರ, ಭರಮಣ್ಣ ಆಶಿರೊಟ್ಟಿ, ಶ್ರೀಕಾಂತ ಆಶಿರೊಟ್ಟಿ, ಕಲ್ಲೋಳೆಪ್ಪ ಆಶಿರೊಟ್ಟಿ ಇದ್ದರು.
100ಕ್ಕೂ ಅಧಿಕ ಜನರು ಶಿಬಿರದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.