ಐಗಳಿ: ಪಂಜಾಬ್ನಲ್ಲಿ ಹೃದಯಾಘಾತದಿಂದ ಮಂಗಳವಾರ ಮೃತಪಟ್ಟಿದ್ದ ಅಗ್ನಿವೀರ ಯೋಧ ಕಿರಣರಾಜ್ ಕೇದಾರಿ ತೆಲಸಂಗ ಅವರ ಅಂತ್ಯಕ್ರಿಯೆ ಗ್ರಾಮದಲ್ಲಿ ಗುರುವಾರ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.
15 ತಿಂಗಳ ಹಿಂದೆ ಸೇನೆಗೆ ಸೇರಿದ್ದ ಕಿರಣರಾಜ್(23), ಕರ್ತವ್ಯದಲ್ಲಿ ಇದ್ದಾಗಲೇ ನಿಧನರಾಗಿದ್ದರು. ಈ ವಿಷಯ ಕೇಳಿ ಐಗಳಿಯಲ್ಲಿ ನೀರವ ಮೌನ ಆವರಿಸಿತ್ತು.
ಗುರುವಾರ ಮಧ್ಯಾಹ್ನ ಗ್ರಾಮಕ್ಕೆ ಪಾರ್ಥಿವ ಶರೀರ ಬರುತ್ತಿದ್ದಂತೆ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ವರ್ತಕರು ಅಂಗಡಿಗಳನ್ನು ಮುಚ್ಚಿ ಗೌರವ ಸೂಚಿಸಿದರು. ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಯೋಧನ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿತ್ತು.
‘ಇನ್ನೇನು ಮಗ ಸೇನೆಗೆ ಸೇರಿದ್ದಾನೆ. ಬಡತನ ನೀಗಲಿದೆ. ಮುಂದಿನ ವರ್ಷ ಆತನ ಮದುವೆ ಮಾಡೋಣ ಎಂದು ಯೋಜಿಸಿದ್ದೆವು. ಈಗ ನಮ್ಮ ಕನಸು ನುಚ್ಚುನೂರಾಗಿದೆ’ ಎಂದು ಎಂದು ಹೆತ್ತವರು ಕಣ್ಣೀರು ಹರಿಸಿದರು.
ಗ್ರಾ.ಪಂ ಅಧ್ಯಕ್ಷೆ ಶಕುಂತಲಾ ಪಾಟೀಲ, ಮಾಜಿ ಶಾಸಕರಾದ ಶಹಜಹಾನ್ ಡೊಂಗರಗಾಂವ, ಮಹೇಶ ಕುಮಠಳ್ಳಿ, ಎಸ್.ಐ.ಡೊಂಗರಗಾಂವ, ಗಜಾನನ ಮಂಗಸೂಳಿ, ಗಿರೀಶ ಬುಟಾಳೆ, ಸಿ.ಎಸ್.ನೇಮಗೌಡ, ಕಲ್ಮೇಶ ಆಸಂಗಿ ಮತ್ತಿತರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.