ಬೆಳಗಾವಿ: ಇಲ್ಲಿನ ‘ರೋಸ್ಟ್ರಮ್ ಡೈರೀಸ್’ ತಂಡದಿಂದ ಇದೇ ಮೊದಲ ಬಾರಿಗೆ ನಾಲ್ಕು ಭಾಷೆಗಳಲ್ಲಿ (ಕನ್ನಡ, ಮರಾಠಿ, ಹಿಂದಿ ಹಾಗೂ ಇಂಗ್ಲಿಷ್) ಆನ್ಲೈನ್ನಲ್ಲಿ ‘ಬೆಳಗಾವಿ ಕಾವ್ಯ ಸಮ್ಮೇಳನ’ ಆಯೋಜಿಸಲಾಗಿದೆ ಎಂದು ಸಂಸ್ಥಾಪಕ ಅಭಿಷೇಕ ಬೆಂಡಿಗೇರಿ ತಿಳಿಸಿದರು.
ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಂತ್ರಜ್ಞಾನ ಬೆಳೆದಂತೆ ಯುವ ಸಮುದಾಯ ಸಾಹಿತ್ಯ ಕ್ಷೇತ್ರದತ್ತ ಆಸಕ್ತಿ ಕಡಿಮೆ ಕಳೆದುಕೊಳ್ಳುತ್ತಿದೆ. ಕೆಲ ಯುವ ಬರಹಗಾರರಿಗೆ ಆಸಕ್ತಿ ಇದ್ದರೂ ಪ್ರತಿಭೆ ಪ್ರದರ್ಶಿಸಲು ವೇದಿಕೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಅವಕಾಶ ಕಲ್ಪಿಸುವ ಉದ್ದೇಶ ಸಮ್ಮೇಳನದ್ದಾಗಿದೆ’ ಎಂದು ಮಾಹಿತಿ ನೀಡಿದರು.
‘ಯಾವುದೇ ಶೈಲಿಯ ಕವಿತೆಗಳನ್ನು ಮೇ 16ರ ಒಳಗೆ ಸಲ್ಲಿಸಬಹುದು. ವಯಸ್ಸಿನ ಮಿತಿ ಇಲ್ಲ. ₹ 100 ನೋಂದಣಿ ಶುಲ್ಕ ಸಲ್ಲಿಸಬೇಕು. ಅತ್ಯುತ್ತಮ 200 ಕವನಗಳನ್ನು ಕವನ ಸಂಕಲನದಲ್ಲಿ ಉಚಿತವಾಗಿ ಪ್ರಕಟಿಸಲಾಗುವುದು. ವಿಶೇಷ ಪ್ರಶಸ್ತಿ ಹಾಗೂ ಬಹುಮಾನಗಳನ್ನು ನೀಡಲಾಗುವುದು. ಪಾಲ್ಗೊಂಡ ಎಲ್ಲರಿಗೂ ಇ–ಸರ್ಟಿಫಿಕೆಟ್ ಕೊಡಲಾಗುವುದು. ಜೂನ್ 6ರಂದು ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ. ವಿಶ್ವ ಕಾವ್ಯ ದಿನವಾದ ಮಾರ್ಚ್ 21ರಂದು ಸಮ್ಮೇಳನಕ್ಕೆ ಚಾಲನೆ ನೀಡಲಾಗಿದೆ. ವಿವಿಧ ರಾಜ್ಯಗಳಿಂದ ಮತ್ತು ವಿದೇಶದಿಂದ 150 ಕವನಗಳು ಸಲ್ಲಿಕೆಯಾಗಿವೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ: 9986186781 ಸಂಪರ್ಕಿಸಬಹುದು’ ಎಂದು ತಿಳಿಸಿದರು.
ಭರತೇಶ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿನೋದ ದೊಡ್ಡಣ್ಣವರ, ಜೆ.ಸ್ವಾತಿ, ಎ. ಡೇವಿಡ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.