ರಾಯಬಾಗ: ಕರ್ನಾಟಕ ಹಾಗೂ ಮಹಾರಾಷ್ಟ್ರ ಭಕ್ತರ ಆರಾಧ್ಯ ದೇವತೆ ಚಿಂಚಲಿ ಮಾಯಕ್ಕದೇವಿ ಜಾತ್ರೆ ಫೆ.28ರಿಂದ ಮಾರ್ಚ್ 3ರವರೆಗೆ ಐದು ದಿನ ವೈಭವೋಪೇತವಾಗಿ ಜರುಗಲಿದೆ.
ಮಾಯಕಾರತಿ, ಮಹಾಕಾಳಿ, ಮಾಯವ್ವ ಎಂಬೆಲ್ಲ ಹೆಸರಿನಿಂದ ಪೂಜಿಸಲ್ಪಡುವ ಮಾಯಕ್ಕ ದೇವಿ ಜಾತ್ರೆಗೆ ಚಿಂಚಲಿ ಪಟ್ಟಣ ಸಂಭ್ರಮದಿಂದ ಸಜ್ಜುಗೊಂಡಿದೆ. ಈ ಜಾತ್ರೆಗೆ ನೆರೆಯ ತಮಿಳುನಾಡು, ಗೋವಾ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಲಕ್ಷಲಕ್ಷ ಭಕ್ತರು ಆಗಮಿಸುತ್ತಾರೆ.
ಜಾತ್ರೆಗೆ ಸುಮಾರು 5 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವುದು ಪ್ರತಿವರ್ಷದ ವಾಡಿಕೆ. ಬೃಹತ್ ಪ್ರಮಾಣದ ಜಾನುವಾರುಗಳ ಜಾತ್ರೆ ಕೂಡ ನಡೆಯುತ್ತದೆ. ಭಕ್ತರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು, ಆಸ್ಪತ್ರೆ, ವಸತಿ ಗೃಹಗಳು, ಇತ್ಯಾದಿ ವ್ಯವಸ್ಥೆ ಮಾಡಲಾಗಿದೆ.
ವಿಶೇಷವೆಂದರೆ ಈ ದೇವಿಯ ಮುಖ್ಯ ವಾಹನ ಕುದುರೆ. ಅವಳ ವಿಗ್ರಹಗಳು, ಪಲ್ಲಕ್ಕಿ, ಉತ್ಸವ ಮೂರ್ತಿ ಎಲ್ಲವೂ ಅಶ್ವಾರೂಢ ಆಗಿರುತ್ತವೆ. ದೇವಿಯ ಕುದುರೆಗೂ ಆಕೆಯೊಂದಿಗೆ ವಿಶಿಷ್ಟ ಮಹತ್ವ ನೀಡಲಾಗಿದೆ. ಭಕ್ತರು ಮಾಯಕ್ಕನ ಕುದುರೆ ಮುಖಕ್ಕೆ ಭಂಡಾರ ಲೇಪಿಸಿ ನಂತರ ಹಣೆಗೆ ಲೇಪಿಸಿಕೊಳ್ಳುವ ವಾಡಿಕೆ ಇದೆ.
ದೇವಿಯು ಮೈಮೇಲೆ ಬಂದವರಂತೆ ಕುಣಿಯುವ ಭಕ್ತರ ಸಂಖ್ಯೆಯೂ ದೊಡ್ಡದು. ಕೈಯಲ್ಲಿ ಬೆತ್ತದಕೋಲು ಹಿಡಿದು ವೀರಾವೇಶದಿಂದ ಕುಣಿಯುವ ಭಕ್ತರು ‘ಚಾಂಗಭಲೋ ಹೋಕ್ ಭಲೋ’ ಎಂದು ಕೂಗುತ್ತ ಡೊಳ್ಳಿನ ನಾದಕ್ಕೆ ತಕ್ಕಂತೆ ಕುಣಿಯುತ್ತಾರೆ.
ಪೌರಾಣಿಕ ಹಿನ್ನೆಲೆ: ಮಾಯಕ್ಕದೇವಿ ಮೂಲತಃ ಮಹಾರಾಷ್ಟ್ರದ ಮಾನದೇಶ(ಕೊಂಕಣ)ದವಳು. ಅಲ್ಲಿಂದ ಕೀಲ ಮತ್ತು ಕಟ್ಟರೆಂಬ ರಾಕ್ಷಸರನ್ನು ಬೆನ್ನಟ್ಟಿ ಬಂದು ಚಿಂಚಲಿಯಲ್ಲಿ ಅವರನ್ನು ಸಂಹರಿಸಿ ಅಲ್ಲಿಯೇ ನೆಲೆಯೂರಿದಳು ಎಂಬುದು ಪ್ರತೀತಿ.
ಒಂದು ದಿನ ದೇವಿಯು ಗ್ರಾಮದ ಹೊರವಲಯದ ಹಳ್ಳದ ಹತ್ತಿರ ಹೋದಾಗ ಅಲ್ಲಿಯೇ ಕುರಿ ಮೇಯಿಸುತ್ತಿದ್ದವರ ಬಳಿ ಹಾಲು ಕೇಳಿದಳಂತೆ. ಕುರಿಗಾಹಿಗಳು ನಿರಾಕರಿಸಿದಾಗ ತನ್ನ ಶಕ್ತಿಯಿಂದ ಹಳ್ಳವೆಲ್ಲ ಹಾಲಾಗಿ ಹರಿಯುವಂತೆ ಮಾಡಿದಳು ಎಂಬುದು ಪವಾಡ ಕತೆ. ಇಂದಿಗೂ ಆ ಹಳ್ಳಕ್ಕೆ ‘ಹಾಲು ಹಳ್ಳ’ ಎಂಬ ಹೆಸರಿದೆ. ಅದರ ಪಕ್ಕದಲ್ಲಿ ಕುರಿ ಕಾಯುತ್ತಿದ್ದವರಲ್ಲಿ ಕುರಿಯ ಉಣ್ಣೆ ಕೇಳಿದ್ದಕ್ಕೆ ಅವರು ನಿರಾಕರಿಸಿದ್ದರಿಂದ ಮುನಿದು ನೀಡಿದ ಶಾಪದಿಂದ ಕುರಿಗಳೆಲ್ಲ ಕಲ್ಲಾಗಿ ಬಿದ್ದವಂತೆ. ಇಂದಿಗೂ ಹಾಲ ಹಳ್ಳದ ದಡದಲ್ಲಿ ಗುಂಪು ಗುಂಪಾಗಿ ಬಿದ್ದ ಕಲ್ಲುಗಳನ್ನು ‘ಉಣ್ಣೆ ಮುತ್ತಪ್ಪನ ಕಲ್ಲುಳಿ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.