ಅಥಣಿ: ‘ಮಹಾತ್ಮ ಗಾಂಧೀಜಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಆಗ್ರಹಿಸಿದರು.
ಕಾಂಗ್ರೆಸ್ ಅಥಣಿ ಮತ್ತು ತೆಲಸಂಗ ಬ್ಲಾಕ್ ವತಿಯಿಂದ ಹಮ್ಮಿಕೊಂಡಿದ್ದ ಮಿನಿವಿಧಾನಸೌಧ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಸಂಸದ ಹೆಗಡೆ ಅವರ ಕೀಳುಮಟ್ಟದ ಅಭಿರುಚಿಯು ಆ ಸ್ಥಾನದ ಘನತೆ-ಗೌರವ ಕಳೆದಿದೆ. ಉಪವಾಸ ಸತ್ಯಾಗ್ರಹ ಮಾಡಿದವರು ನಾಟಕ ಆಡಿದ್ದಾರೆ ಎಂಬ ಹೇಳಿಕೆ ಖಂಡನಾರ್ಹ. ಈ ಮೂಲಕ ಅವರು ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ಅನಿಲ ಸುಣಧೋಳಿ, ರಮೇಶ್ ಸಿಂದಗಿ, ಸತ್ಯಪ್ಪ ಬಾಗೆನ್ನವರ, ಬಸವರಾಜ ಬುಟಾಳಿ, ರಾವಸಾಬ ಐಹೊಳೆ, ಶ್ರೀಕಾಂತ ಪೂಜಾರಿ, ಸೈಯದ್ ಅಮೀನ್ ಗದ್ಯಾಳ, ರಾಜು ಜಮಖಂಡಿಕರ, ಶಿವು ಗುಡ್ಡಾಪುರ, ಬೀರಪ್ಪ ಯಕ್ಕಂಚಿ, ಶಿವು ಸಂಕ, ಬಂದೇನವಾಜ ಮಿರ್ಜಿ, ರಾಹುಲ ಮಾಚಕನೂರ, ರೇಖಾ ಪಾಟೀಲ, ಸುನೀತಾ ಐಹೊಳೆ, ಮಹಾದೇವಿ ಹೋಳಿಕಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.