ಸಂಕೇಶ್ವರ: ‘ರಾಜ್ಯದಲ್ಲಿ ರೈತರ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದ್ದರೆ, ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ರೈತರು ಸ್ಪರ್ಧಿಸಬೇಕು. ರೈತರ ಶಕ್ತಿ ಮತ್ತು ಬೇಡಿಕೆಗಳು ಏನು ಎಂಬುದು ಎಲ್ಲರಿಗೂ ಗೊತ್ತಾಗಬೇಕು’ ಎಂದು ರೈತ ಸಂಘಗಳ ಏಕೀಕರಣ ಸಮಿತಿಯ ರಾಜ್ಯ ಸಂಚಾಲಕ ಪಚ್ಚೆ ನಂಜುಂಡಸ್ವಾಮಿ ಕರೆ ನೀಡಿದರು.
ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಬುಧವಾರ ಹಮ್ಮಿಕೊಂಡಿದ್ದ ರೈತ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ರೈತರು ಬೆಳೆದ ಬೆಳೆಗೆ ಉತ್ತಮ ದರ ಸಿಗುವಂತಾಗಲು ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ ಸರ್ಕಾರವು ಕೃಷಿ ಉತ್ಪನ್ನಗಳ ಬೆಲೆ ನಿಗದಿಪಡಿಸಬೇಕು. ತರಕಾರಿ ಬೆಳೆಗಳು ಅಲ್ಪಾವಧಿಗೆ ಬಾಳಿಕೆ ಬರುತ್ತವೆ. ಶೀತಲೀಕರಣ ಘಟಕ ಸ್ಥಾಪಿಸಲು ಆದ್ಯತೆ ನೀಡಬೇಕು’ ಎಂದರು.
ಹಸಿರು ಸೇನೆ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಚುನಪ್ಪಾ ಪೂಜೇರಿ ಮಾತನಾಡಿ, ‘ಹುಕ್ಕೇರಿ ತಾಲ್ಲೂಕಿನಲ್ಲಿ ಎರಡು ಜಲಾಶಯಗಳಿದ್ದರೂ ಅವು ಹುಕ್ಕೇರಿನ ತಾಲ್ಲೂಕಿನ ರೈತರಿಗೆ ಪ್ರಯೋಜನವಾಗುತ್ತಿಲ್ಲ. ನೀರನ್ನು ಪಡೆಯಲು ಮತ್ತು ಸದ್ಬಳಕೆ ಮಾಡಿಕೊಳ್ಳಲು ತಾಲ್ಲೂಕಿನ ರೈತರು ಒಗ್ಗಟ್ಟಿನಿಂದ ಹೋರಾಡಬೇಕು’ ಎಂದರು.
ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ಸತ್ಕರಿಸಲಾಯಿತು. ಶಶಿಕಾಂತ ಗುರೂಜಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭಕ್ಕೂ ಮುನ್ನ ರೈತರು ಪಟ್ಟಣದಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.