ಬೈಲಹೊಂಗಲ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಉಡಿಕೇರಿ ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಲು ಮುಂದಾದ ಆರೋಪಿ, ಕುರಿಗಾಹಿ ವಿಠ್ಠಲ ಶಿವಪ್ಪ ಕುರಿ ಎಂಬುವವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ವಿಪರೀತ ಮದ್ಯಪಾನ ಮಾಡಿದ್ದ ವಿಠ್ಠಲ ಗುರುವಾರ ಸಂಜೆ ಆಸ್ಪತ್ರೆಗೆ ಬಂದಿದ್ದರು. ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಕೊಡಲಿಯನ್ನು ಅತ್ತಂದಿತ್ತ ಬೀಸುತ್ತಿದ್ದರು. ಇದನ್ನು ನೋಡಿದ ಸಿಬ್ಬಂದಿ, ಭಯದಿಂದ ಆಸ್ಪತ್ರೆಯ ಬಾಗಿಲು ಹಾಕಿಕೊಂಡಿದ್ದರು. ಇದರಿಂದ ರೊಚ್ಚಿಗೆದ್ದ ವಿಠ್ಠಲ, ತಾನು ಬರುವುದನ್ನು ನೋಡಿ ಬಾಗಿಲು ಹಾಕಿಕೊಂಡಿದ್ದಾರೆ ಎಂದು ಅರ್ಥೈಸಿಕೊಂಡು ಕೊಡಲಿಯಿಂದ ಬಾಗಿಲಿಗೆ ಹೊಡೆದಿದ್ದಾರೆ. ಕಿಟಕಿಗಳ ಗಾಜು ಒಡೆದುಹಾಕಿದ್ದಾರೆ.
‘ಅವರನ್ನು ಗದರಿಸಿ, ಶಾಂತವಾಗಿಸಲು ಯತ್ನಿಸಿದ ಡಿ ದರ್ಜೆ ನೌಕರ ಮಹೇಶ ಮೇಲೆಯೇ ಕೊಡಲಿಯಿಂದ ದಾಳಿ ನಡೆಸಲು ಯತ್ನಿಸಿದ್ದರು’ ಎಂದು ಆರೋಗ್ಯ ಕೇಂದ್ರದ ಅಧಿಕಾರಿ ಡಾ.ಗೀತಾ ಪೊಲೀಸರಿಗೆ ತಿಳಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು, ವಿಠ್ಠಲನನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.