ಬೆಳಗಾವಿ: ‘ವಿಶ್ವ ಗುರು ಬಸವಣ್ಣ ಅವರನ್ನು ಒಳಗೊಂಡು ಸಪ್ತ ಪ್ರಮಥರಲ್ಲಿ ಚಿನ್ಮಯಜ್ಞಾನಿ ಚನ್ನಬಸವಣ್ಣ ಒಬ್ಬರು. ಅವರು ಸಮಾಜಕ್ಕೆ ಧಾರ್ಮಿಕ ಸಂವಿಧಾನ ರೂಪಿಸಿಕೊಟ್ಟರು’ ಎಂದು ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಉಪಾಧ್ಯಕ್ಷ ಅಶೋಕ ಬೆಂಡಿಗೇರಿ ಹೇಳಿದರು.
ಜಿಲ್ಲಾ ಲಿಂಗಾಯತ ಧರ್ಮ ಮಹಾಸಭಾ, ರಾಷ್ಟ್ರೀಯ ಬಸವ ದಳ, ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ ಗಣ, ಗಣಾಚಾರ ದಳ, ವಚನ ಚಿಂತನಾ ವೇದಿಕೆ ಮತ್ತು ವಿಶ್ವಗುರು ಬಸವ ಜ್ಯೋತಿ ಯಾತ್ರಾ ಸಮಿತಿಗಳ ಸಹಯೋಗದಲ್ಲಿ ‘ದಸರಾ ಹಬ್ಬವನ್ನು ಕಲ್ಯಾಣ ಕ್ರಾಂತಿ ಸಂಸ್ಮರಣೆಯಾಗಿ ಆಚರಿಸುವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮಾನತೆ ಸಾರುವ ಲಿಂಗಾಯತ ಧರ್ಮದ ಆತ್ಮ ವಿಶ್ವಗುರು ಬಸವಣ್ಣನವರಾದರೆ, ಚನ್ನಬಸವಣ್ಣ ಪ್ರಾಣ ಸ್ವರೂಪವಾಗಿದ್ದಾರೆ. ಲಿಂಗಾಯತ ಧರ್ಮಕ್ಕೆ ತಾತ್ವಿಕ, ಸೈದ್ಧಾಂತಿಕ ಚೌಕಟ್ಟನ್ನು ಮತ್ತು ವಿಚಾರಕ್ಕೆ ಒಂದು ಆಚಾರ ಕ್ರಮವನ್ನು ಒದಗಿಸಿಕೊಟ್ಟವರು. ಅವರ ವಚನಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ’ ಎಂದರು.
ಶರಣ ದಂಪತಿ ತಾರಾಮತಿ– ಮಾರಯ್ಯ ಗಡಗಲಿ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಶರಣೆ ಅನ್ನಪೂರ್ಣಾ ರಾಂಪುರೆ ಬಸವ ಧ್ವಜಾರೋಹಣ ನೆರವೇರಿಸಿದರು. ಶರಣೆ ನೀಲಗಂಗಾ ಪಾಟೀಲರು ಸ್ವಾಗತಿಸಿದುರು. ಶೀಲಾ ಗುಡಸ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.