ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಭಕ್ತರು ಶ್ರದ್ಧೆಯಿಂದ ಹನುಮ ಜಯಂತಿ ಆಚರಿಸಿದರು.
ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತ, ಕ್ಯಾಂಪ್ ಪ್ರದೇಶ, ಮಾರುತಿ ಗಲ್ಲಿ ಮತ್ತಿತರ ಬಡಾವಣೆಗಳಲ್ಲಿ ಇರುವ ಹನುಮಾನ ದೇವಸ್ಥಾನಗಳು, ಶಿವಬಸವ ನಗರದ ಜ್ಯೋತಿಬಾ ದೇವಸ್ಥಾನವನ್ನು ಅಲಂಕರಿಸಲಾಗಿತ್ತು.
ಎಲ್ಲ ದೇವಾಲಯಗಳು ಭಕ್ತರಿಂದ ಕಿಕ್ಕಿರಿದು ತುಂಬಿದ್ದವು. ಮುಂಜಾವಿನಿಂದಲೇ ದೇಗುಲಗಳತ್ತ ಭಕ್ತಿಯಿಂದ ಹೆಜ್ಜೆಹಾಕಿದ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಸಕಲ ಜೀವರಾಶಿಗೆ ಒಳಿತಾಗಲೆಂದು ವಿಶೇಷ ಪೂಜೆ ನೆರವೇರಿಸಿದರು. ತಮ್ಮ ಇಷ್ಟಾರ್ಥ ಈಡೇರಿದ ಹಿನ್ನೆಲೆಯಲ್ಲಿ ದೇವರಿಗೆ ವಿವಿಧ ಕಾಣಿಕೆಗಳನ್ನು ಅರ್ಪಿಸಿ ಭಕ್ತಿ ಮೆರೆದರು.
ರಾಮತೀರ್ಥ ನಗರದ ಕಣಬರ್ಗಿ ಕೆರೆ ಬಳಿ ಇರುವ ಹನುಮಾನ ಮಂದಿರದಲ್ಲಿ ನಡೆದ ಹನುಮಾನ ಜಯಂತ್ಯುತ್ಸವದಲ್ಲಿ ಸುರೇಶ ಯಾದವ ದಂಪತಿ ಹೋಮ-ಹವನ ನೆರೆವೇರಿಸಿದರು. ಮುತ್ತೈದಯರಿಂದ ತೊಟ್ಟಿಲು ತೂಗುವ ಪೂಜೆ ಸಲ್ಲಿಸಲಾಯಿತು.
ವಿವಿಧ ದೇಗುಲಗಳಲ್ಲಿ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಇಡೀ ದಿನ ವಿವಿಧ ಕಾರ್ಯಕ್ರಮ ನೆರವೇರಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.