ADVERTISEMENT

ಚುನಾವಣೆ ತರಬೇತಿ ವೇಳೆ ಮೂವರಿಗೆ ಅನಾರೋಗ್ಯ; ಅಸಮರ್ಪಕ ವ್ಯವಸ್ಥೆ- ಆರೋಪ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 14:55 IST
Last Updated 16 ಏಪ್ರಿಲ್ 2019, 14:55 IST

ಗೋಕಾಕ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿ ಸೋಮವಾರ ಆಯೋಜಿಸಿದ್ದ ತರಬೇತಿ ಸಂದರ್ಭದಲ್ಲಿ ಮೂವರು ಅನಾರೋಗ್ಯಕ್ಕೆ ಒಳಗಾದರು.

ಸರ್ಕಾರಿ ಪ.ಪೂ. ಕಾಲೇಜು ಹಾಗೂ ಜೆಎಸ್ಎಸ್ ಪದವಿ ಕಾಲೇಜುಗಳಲ್ಲಿ ಪ್ರತ್ಯೇಕ ತರಬೇತಿ ಆಯೋಜಿಸಲಾಗಿತ್ತು. ಪ್ರತಿ ಕೇಂದ್ರದಲ್ಲಿ 1,240 ಸಿಬ್ಬಂದಿ ಭಾಗವಹಿಸಿದ್ದರು. ಆಹಾರ ಇಲಾಖೆಯ ಉಪ ತಹಶೀಲ್ದಾರ್‌ ಎಂ.ಎ. ಚೌಧರಿ ರಕ್ತದೊತ್ತಡ ಕಡಿಮೆಯಾಗಿ ಅನಾರೋಗ್ಯಕ್ಕೆ ಒಳಗಾದ್ದರಿಂದ ಅವರನ್ನು ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ಸಾಗಿಸಲಾಯಿತು. ಸವದತ್ತಿಯ ಉಪ ತಹಶೀಲ್ದಾರ್ ಸುರೇಶ ಎಂ. ಕಟಮಳ್ಳಿ ಹಾಗೂ ಶಿವಮೊಗ್ಗದ ಕಂದಾಯ ಸಿಬ್ಬಂದಿ ರಮೇಶ ಎಚ್.ಎಂ. ಅವರಿಗೂ ರಕ್ತದೊತ್ತಡ ಕಡಿಮೆಯಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.

ಈ ಹಿಂದೆ ಚುನಾವಣಾ ಸಮಯದಲ್ಲಿ ಸಿಬ್ಬಂದಿಗೆ ನಿರ್ದಿಷ್ಟ ಸ್ಥಳದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಆದರೆ ಈ ಬಾರಿ ಆ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ ತರಬೇತಿ ಸ್ಥಳಕ್ಕೆ ಬಸ್, ಆಟೊರಿಕ್ಷಾದಲ್ಲಿ ಬರಬೇಕಾಯಿತು. ಹಲವರು ನಡೆದು ಬಂದಿದ್ದರು. ಕೇಂದ್ರದಲ್ಲಿ ಉಪಾಹಾರದ ವ್ಯವಸ್ಥೆಯನ್ನೂ ಸರಿಯಾಗಿ ಮಾಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ADVERTISEMENT

‘ಜಿಲ್ಲಾ ಚುನಾವಣಾಧಿಕಾರಿ ಸೂಚನೆಯಂತೆ ಎಲ್ಲ ಸಿಬ್ಬಂದಿಗೂ ಊಟ ಮತ್ತು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.