ADVERTISEMENT

ಇಗ್ನೊ: ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 12:50 IST
Last Updated 28 ಜನವರಿ 2020, 12:50 IST
   

ಬೆಳಗಾವಿ: ‘ವಿಜಯಪುರದಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ವಿವಿಧ ಕೋರ್ಸ್‌ಗಳಿಗೆ ಪ್ರವೇಶಗಳನ್ನು ಪ್ರಾರಂಭಿಸಲಾಗಿದ್ದು, ಇದೇ ತಿಂಗಳ 31ರೊಳಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು’ ಎಂದು ನಿರ್ದೇಶಕ ಎ.ವರದರಾಜನ್‌ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿವರ್ಷ ಜನವರಿ ಹಾಗೂ ಜುಲೈನಲ್ಲಿ ಪ್ರವೇಶ ಕಲ್ಪಿಸಲಾಗುತ್ತದೆ. ಈಗ ಆನ್‌ಲೈನ್‌ ಮೂಲಕವೂ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ. http://ignouadmission.samarth.edu.in ಸಂಪರ್ಕಿಸಬಹುದಾಗಿದೆ’ ಎಂದರು.

‘ವಿವಿಧ ಕೋರ್ಸ್‌ಗಳು ಸೇರಿದಂತೆ ಪ್ರಥಮ ಚಿಕಿತ್ಸಾ ಪ್ರಮಾಣಪತ್ರ (ಸಿಎಫ್‌ಎಐಡಿ), ನರ್ಸ್‌ಗಳಿಗಾಗಿ ಸಮುದಾಯ ಆರೋಗ್ಯದಲ್ಲಿ ಬ್ರಿಡ್ಜ್‌ಪ್ರೋಗ್ರಾಂ (ಸಿಸಿಎಚ್‌), ಹೋಮ್‌ ಹೆಲ್ತ್‌ ಅಸಿಸ್ಟಂಟ್‌ನಲ್ಲಿ ಪ್ರಮಾಣಪತ್ರ (ಸಿಎಚ್‌ಎಚ್‌ಎ), ಜನರಲ್‌ ಡ್ಯೂಟಿ ಅಸಿಸ್ಟಂಟ್‌ನಲ್ಲಿ ಪ್ರಮಾಣಪತ್ರ (ಸಿಜಿಡಿಎ), ಜೇರಿಯಾಟ್ರಿಕ್‌ ಕೇರ್‌ನಲ್ಲಿ ಪ್ರಮಾಣಪತ್ರ (ಸಿಜಿಸಿಎ), ಪ್ಲೆಬೊರ್ಟೋಮಿ ಅಸಿಸ್ಟಂಟ್‌ನಲ್ಲಿ ಪ್ರಮಾಣಪತ್ರ (ಸಿಪಿಎಚ್‌ಎ), ಮಾಸ್ಟರ್‌ ಆಫ್‌ ಆರ್ಟ್ಸ್‌ ಇನ್‌ ಡೆವಲಪ್‌ಮೆಂಟ್‌ ಸ್ಟಡೀಸ್‌ (ಎಂಎಡಿವಿಎಸ್‌) ಹಾಗೂ ಪೋಸ್ಟ್‌ ಗ್ರ್ಯಾಜುವೇಟ್‌ ಡಿಪ್ಲೋಮಾ ಇನ್‌ ಅರ್ಬನ್‌ ಪ್ಲ್ಯಾನಿಂಗ್‌ ಅಂಡ್‌ ಡೆವಲಪ್‌ಮೆಂಟ್‌ (ಪಿಜಿಡಿಯುಪಿಡಿಎಲ್‌) ಹೊಸದಾಗಿ ಆರಂಭಿಸಲಾಗಿದೆ’ ಎಂದರು.

ADVERTISEMENT

‘ತರಗತಿಗಳಿಗೆ ಹಾಜರಾತಿ ಕಡ್ಡಾಯವಿಲ್ಲ. ಆದರೆ, ಪ್ರಾಕ್ಟಿಕಲ್‌ ತರಗತಿಗಳಿಗೆ ಹಾಜರಾತಿ ಕಡ್ಡಾಯವಿದೆ. ಶನಿವಾರ, ಭಾನುವಾರದಂದು ತರಗತಿಗಳು ನಡೆಯುತ್ತವೆ. ಇವುಗಳಿಗೆ ಹಾಜರಾಗಬಹುದು’ ಎಂದು ಹೇಳಿದರು.

‘ಎಸ್‌.ಸಿ/ ಎಸ್‌.ಟಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡುವ ವ್ಯವಸ್ಥೆಯಿದೆ. ಸಿಸಿಎಚ್‌ ಕೋರ್ಸ್‌ನಲ್ಲಿ ಮಾತ್ರ ಎಲ್ಲ ವಿದ್ಯಾರ್ಥಿಗಳ ಶುಲ್ಕವನ್ನು ಕೇಂದ್ರ ಸರ್ಕಾರವೇ ಭರಿಸಲಿದ್ದು, ಸಂಪೂರ್ಣವಾಗಿ ಉಚಿತವಾಗಿರುತ್ತದೆ’ ಎಂದು ಹೇಳಿದರು.

‘ಪ್ರಾದೇಶಿಕ ಕೇಂದ್ರವು ವಿಜಯಪುರ ಸೇರಿದಂತೆ ಬೆಳಗಾವಿ, ಧಾರವಾಡ, ಬಾಗಲಕೋಟೆ, ಬೀದರ್‌, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಹಾವೇರಿ, ಗದಗ, ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡಿದೆ. ಬೆಳಗಾವಿ ವ್ಯಾಪ್ತಿಯಲ್ಲಿ ಆರ್‌.ಪಿ.ಡಿ ಕಾಲೇಜ್‌, ಕೆ.ಎಲ್‌.ಇ ಇನ್‌ಸ್ಟಿಟ್ಯೂಟ್‌ ಆಫ್‌ ನರ್ಸಿಂಗ್‌ ಸೈನ್ಸ್‌, ಕಣಬರ್ಗಿಯ ಶ್ರೀ ಸಾಯಿ ಅಂಜನ ರೂರಲ್‌ ಬಿ.ಕಾಂ ಡಿಗ್ರಿ ಕಾಲೇಜ್‌ ಹಾಗೂ ಟಿಳಕವಾಡಿಯ ಜೈನ್‌ ಮಹಿಳಾ ಮಂಡಳದ ಕಾಲೇಜ್‌ನಲ್ಲಿ ಅಧ್ಯಯನ ಕೇಂದ್ರ ಹೊಂದಿದೆ’ ಎಂದು ತಿಳಿಸಿದರು.

ಆರ್‌ಪಿಡಿ ಕಾಲೇಜಿನ ಅಧ್ಯಯನ ಕೇಂದ್ರದ ಸಂಯೋಜಕ ಪ್ರಸನ್ನ ಜೋಷಿ, ಬಿ.ಇಡ್‌ ಅಧ್ಯಯನ ಕೇಂದ್ರದ ಸಂಯೋಜಕ ಎಸ್‌.ಡಿ. ಹಿರೇಮಠ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.