ಬೆಳಗಾವಿ: ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮದಲ್ಲಿರುವ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆಒತ್ತಾಯಿಸಿ ಗ್ರಾಮದ ಆದಿಶಕ್ತಿ ಮಾತಂಗಿದೇವಿ ಮಹಿಳಾ ಸಂಘದ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಸೋಮವಾರ ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷೆ ದುರ್ಗವ್ವ ಮ್ಯಾಗೇರಿ ಮಾತನಾಡಿ, ‘ಗ್ರಾಮದಲ್ಲಿರುವ ಸವದತ್ತಿ ರಸ್ತೆಯಲ್ಲಿ ಎರಡು ಮದ್ಯದಂಗಡಿಗಳಿದ್ದು, ಇವುಗಳಿಂದ ರಸ್ತೆಯಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಕುಡುಕರು ಕುಡಿದ ಮತ್ತಿನಲ್ಲಿ ರಸ್ತೆಯ ಅಕ್ಕಪಕ್ಕದ ಎಲ್ಲೆಂದರಲ್ಲಿ ನಿಲ್ಲುವುದು, ಮಲಗುತ್ತಿರುವುದರಿಂದ ಮಹಿಳೆಯರು ಇಲ್ಲಿ ಓಡಾಡುವುದೇ ಕಷ್ಟವಾಗಿದೆ’ ಎಂದು ಆರೋಪಿಸಿದರು.
‘ಕೆಲವರು ಕುಡಿದ ಮತ್ತಿನಲ್ಲಿ ತಮ್ಮ ಮನೆಗಳಿಗೆ ಬಂದು ಪತ್ನಿ ಹಾಗೂ ಕುಟುಂಬದ ಸದಸ್ಯರೊಂದಿಗೆ ಪ್ರತಿದಿನ ಜಗಳವಾಡುತ್ತಾರೆ. ಇದರಿಂದ ಕುಟುಂಬಗಳ ನೆಮ್ಮದಿಯೂ ಹಾಳಾಗಿದೆ. ಕುಡುಕರು ತಾವು ಕೂಲಿ ಮಾಡಿ ಗಳಿಸಿದ ಹಣವನ್ನೆಲ್ಲ ಮದ್ಯದಂಗಡಿಗಳಿಗೆ ಹಾಕುತ್ತಿದ್ದಾರೆ. ಹೀಗಾಗಿ, ಕೂಡಲೇ ಮದ್ಯದಂಗಡಿಗಳನ್ನು ಮುಚ್ಚಿಸಬೇಕು’ ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಉಪಾಧ್ಯಕ್ಷೆ ರೇಣವ್ವ ಬಡೆಪ್ಪನವರ, ಸದಸ್ಯರಾದ ದ್ರಾಕ್ಷಾಯಿಣಿ ಬಸಲಿಂಗನವರ, ಮಾದೇವಿ ಕಾಳಪ್ಪನವರ, ಅನಸೂಯಾ ಬಸಲಿಂಗನವರ, ಕಸ್ತೂರಿ ಕೋಟೂರ, ಅನಸೂಯಾ ಮುದೆನ್ನವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.