ಬೆಳಗಾವಿ: ‘ಜಂಗಲವಾಲೆ ಬಾಬಾ’ ಎಂದು ಪ್ರಸಿದ್ಧರಾಗಿದ್ದ ಜೈನ ಮುನಿ ಚಿನ್ಮಯಸಾಗರ ಶುಕ್ರವಾರ ಸಂಜೆ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಜುಗೂಳ ಗ್ರಾಮದಲ್ಲಿ ಸಮಾಧಿ ಹೊಂದಿದರು. ಶನಿವಾರ ಅವರ ಅಂತ್ಯಕ್ರಿಯೆ ನಡೆಯಲಿದೆ.
ನೀರು ತ್ಯಜಿಸುವ ‘ಯಮಸಲ್ಲೇಖನ’ ವ್ರತವನ್ನುಕಳೆದ ಶನಿವಾರದಿಂದ ಕೈಗೊಂಡಿದ್ದರು. ಇದಕ್ಕೂ ಮೊದಲು ಅನ್ನ ತ್ಯಜಿಸುವ ‘ನಿಯಮ ಸಲ್ಲೇಖನ’ ವ್ರತವನ್ನು25 ದಿನಗಳ ಕಾಲ ಕೈಗೊಂಡಿದ್ದರು.
ದರುಶನ ಪಡೆದ ಸಾವಿರಾರು ಭಕ್ತರು:ಮುನಿಯವರು ‘ನಿಯಮ ಸಲ್ಲೇಖನ’ ಹಾಗೂ ‘ಯಮಸಲ್ಲೇಖನ’ ವ್ರತ ಕೈಗೊಂಡಿದ್ದಾಗ ರಾಜ್ಯದಿಂದಷ್ಟೇ ಅಲ್ಲದೇ, ರಾಜಸ್ಥಾನ, ಗುಜರಾತ್ ರಾಜ್ಯಗಳಿಂದ ಸಾವಿರಾರು ಭಕ್ತರು, ಮುನಿಗಳು ಮತ್ತು ಸ್ವಾಮೀಜಿಗಳು ದರುಶನ ಪಡೆದಿದ್ದರು.
1988ರಲ್ಲಿ ಮುನಿದೀಕ್ಷೆ:ಜುಗೂಳದಲ್ಲಿಯೇ ಜನಿಸಿದ್ದ ಅವರು, ಜೈನ ಧರ್ಮದ ಅಹಿಂಸಾ ತತ್ವಗಳಿಗೆ ಆಕರ್ಷಿತರಾಗಿ 1988ರ ಮಾರ್ಚ್ 31ರಂದು ಆಚಾರ್ಯ ವಿದ್ಯಾಸಾಗರ ಅವರಿಂದ ಮುನಿದೀಕ್ಷೆ ಪಡೆದಿದ್ದರು. ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ ಮೊದಲಾದ ಕಡೆಗಳಲ್ಲಿ ತಲಾ ಎರಡು ವರ್ಷ, ಮಧ್ಯಪ್ರದೇಶದಲ್ಲಿ 15 ವರ್ಷ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ತಲಾ 5 ವರ್ಷಗಳವರೆಗೆ ಆದಿವಾಸಿಗಳ ಮನಪರಿವರ್ತನೆ ಮಾಡಿದ್ದರು. ಹೆಚ್ಚು ಕಾಲ ಅರಣ್ಯ ಪ್ರದೇಶದಲ್ಲಿ ಸಮಯ ಕಳೆದಿದ್ದರಿಂದ ಅವರನ್ನು ‘ಜಂಗಲವಾಲೆ ಬಾಬಾ’ ಎಂದು ಭಕ್ತರು ಕರೆಯುತ್ತಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.