ಬೆಳಗಾವಿ: ‘ಮುಸ್ಲಿಮರನ್ನು ಓಲೈಸುವ ಭರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಎಲ್ಲ ಜಾತಿಗಳನ್ನು ಒಡೆದುಹಾಕಿದ್ದಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದರು.
ನಗರದಲ್ಲಿ ಬುಧವಾರ ಬಿಜೆಪಿಯಿಂದ ನಡೆದ ಎರಡನೇ ಹಂತದ ಜನಾಕ್ರೋಶ ಯಾತ್ರೆಯ ಸಭೆಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಮುಸಲ್ಮಾನರನ್ನು ‘ನಂಬರ್ ಒನ್’ ಮಾಡಲು ವಿದೇಶಿ ಕೈವಾಡವಿರುವ ಬಗ್ಗೆ ಅನುಮಾನವಿದೆ. ಭಾರತವನ್ನು ಪಾಕಿಸ್ತಾನ ಮಾಡುತ್ತೇವೆ ಎಂದು ಕೆಲವು ಭಯೋತ್ಪಾದಕರು ಪತ್ರದಲ್ಲಿ ಬರೆದು ಹಂಚಿದ್ದಾರೆ’ ಎಂದರು.
‘ಸಿದ್ದರಾಮಯ್ಯ ಅವರ ಕುರ್ಚಿಗೆ ನವೆಂಬರ್ನಲ್ಲಿ ಬಾಂಬ್ ಬೀಳುವುದು ಖಾತ್ರಿಯಾಗಿದೆ. ನಿರ್ಗಮನ ನಿಶ್ಚಿತವಾಗಿರುವುದಕ್ಕೆ ಅವರು ಈ ರೀತಿ ಮಾಡುತ್ತಿದ್ದಾರೆ’ ಎಂದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ‘ವಿದೇಶಕ್ಕೆ ಶಿಕ್ಷಣಕ್ಕಾಗಿ ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹30 ಲಕ್ಷ ನೆರವು ಘೋಷಿಸಿದ್ದಾರೆ. ಇದೇ ನೆರವು ಹಿಂದೂ ವಿದ್ಯಾರ್ಥಿಗಳಿಗೆ ಏಕಿಲ್ಲ? ಸಿದ್ದರಾಮಯ್ಯ ಹಿಂದೂ ವಿರೋಧಿ ಎಂಬುದನ್ನು ಪದೇಪದೇ ಸಾಬೀತು ಆಗುತ್ತಿದೆ’ ಎಂದರು.
‘ರಾಜ್ಯ ಸರ್ಕಾರವು ಮುಸ್ಲಿಮರ ಓಲೈಕೆಯಷ್ಟೇ ಮಾಡಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಪರಿಶಿಷ್ಟರ ಹಣವನ್ನು ಲೂಟಿ ಮಾಡಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದ ನಾರಾಯಣಸ್ವಾಮಿ, ಸಂಸದರಾದ ಜಗದೀಶ ಶೆಟ್ಟರ್, ಗೋವಿಂದ ಕಾರಜೋಳ, ಶಾಸಕರಾದ ಅಭಯ ಪಾಟೀಲ, ಬಾಲಚಂದ್ರ ಜಾರಕಿಹೊಳಿ, ನಿಖಿಲ್ ಕತ್ತಿ, ದುರ್ಯೋಧನ ಐಹೊಳೆ, ಮುಖಂಡರಾದ ಬಿ.ಶ್ರೀರಾಮುಲು, ಅನಿಲ ಬೆನಕೆ, ಪಿ.ರಾಜೀವ್ ಇದ್ದರು.
Highlights - null
Quote - ಒಂದು ಕಾಲಕ್ಕೆ ಕರ್ನಾಟಕ ಪ್ರಗತಿಪರ ರಾಜ್ಯವಾಗಿತ್ತು. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಇಂದು ಹಿಂದುಳಿದ ರಾಜ್ಯವಾಗಿದೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸದ
Quote - ಜಾತಿ ಗಣತಿ ವರದಿಯಲ್ಲಿ ನೇಕಾರರು ಮರಾಠ ಮತ್ತು ಜೈನರ ಬಗ್ಗೆ ಉಲ್ಲೇಖವೇ ಇಲ್ಲ. ಇದನ್ನು ಹೇಗೆ ಒಪ್ಪಲು ಸಾಧ್ಯ? ಅಭಯ ಪಾಟೀಲ ಶಾಸಕ
Cut-off box - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.