ಮೋಳೆ: ‘ರಾಜೀನಾಮೆ ನೀಡಿರುವ ಶಾಸಕರನ್ನು ಸುಪ್ರೀಂ ಕೋರ್ಟ್ ಅನರ್ಹರೆಂದು ತೀರ್ಪು ನೀಡಿದೆ. ಜನತಾ ನ್ಯಾಯಾಲಯದಲ್ಲೂ ಅವರಿಗೆ ತಕ್ಕ ಶಾಸ್ತಿ ಮಾಡಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಕಾಗವಾಡ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭರಮಗೌಡ (ರಾಜು) ಕಾಗೆ ಪರವಾಗಿ ಶಿರಗುಪ್ಪಿ ಗ್ರಾಮದಲ್ಲಿ ಗುರುವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಅನರ್ಹ ಶಾಸಕ ಶ್ರೀಮಂತ ಪಾಟೀಲ ಟಿಕೆಟ್ ನೀಡಿದ ಪಕ್ಷ ಹಾಗೂ ಮತದಾರರನ್ನು ವಂಚಿಸಿದ್ದಾರೆ. ಹಣದಿಂದ ಮತಗಳನ್ನು ಖರೀದಿಸಬಹುದೆಂಬ ಭ್ರಮೆಯಲ್ಲಿದ್ದಾರೆ. ಇಂಥವರು ಸಾರ್ವಜನಿಕ ಜೀವನದಲ್ಲಿ ಇರಬಾರದು. ರಾಜ್ಯ ರಾಜಕಾರಣದಲ್ಲಿ ಮುಂದುವರಿಯಬಾರದು. ಬಿಜೆಪಿಯವರ ಅಧಿಕಾರದ ಲಾಲಸೆಯಿಂದಾಗಿ ಉಪ ಚುನಾವಣೆ ಬಂದಿದೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದ್ದು, ಪ್ರಜ್ಞಾವಂತ ಮತದಾರರು ಅನರ್ಹರಿಗೆ ಬುದ್ಧಿ ಕಲಿಸಬೇಕು’ ಎಂದು ಕೋರಿದರು.
‘ಈ ಚುನಾವಣೆ ಯಾರಿಗೂ ಬೇಕಾಗಿರಲಿಲ್ಲ. ಆದರೆ, ಕೆಲವರು ಸ್ವಾರ್ಥಕ್ಕಾಗಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದರು. ಪಕ್ಷಾಂತರಿಗಳಿಗೆ ಜನರು ಪಾಠ ಕಲಿಸಬೇಕು’ ಎಂದರು.
ಶಾಸಕ ಆನಂದ ನ್ಯಾಮಗೌಡರ, ಮುಖಂಡ ಪ್ರಕಾಶ ಹುಕ್ಕೇರಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಮುಖಂಡರಾದ ಮೋಹನರಾವ್ ಶಹಾ, ವಿಜಯಕುಮಾರ ಅಕಿವಾಟೆ, ದಿಗ್ವಿಜಯ ಪವಾರದೇಸಾಯಿ, ವಿದ್ಯಾ ಹಿರೇಮಠ, ರವೀಂದ್ರ ಗಾಣಿಗೇರ, ಗಜಾನನ ಯರಂಡೋಲಿ, ಸಂಜಯ ಭಿರಡಿ, ಆದಿನಾಥ ದಾನೊಳ್ಳಿ, ಸುನೀತಾ ಹುರಕಡ್ಲಿ, ವಿಜಯಾ ಹಿರೇಮಠ, ರಾಹುಲ್ ಕಟಗೇರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.