ಬೆಳಗಾವಿ: ದೇಶ–ವಿದೇಶದ ವಿವಿಧೆಡೆ ದಾದಿಯರಾಗಿ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ನರ್ಸಿಂಗ್ವಿಜ್ಞಾನ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳೊಂದಿಗೆ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಂಗಳವಾರ ಆನ್ಲೈಲ್ನಲ್ಲಿ ನೇರ ಸಂವಾದ ನಡೆಸಿದರು.
ಯುಎಸ್ಎ, ಯುಕೆ, ಕೆನಡಾ, ಐರ್ಲೆಂಡ್, ನ್ಯೂಜಿಲೆಂಡ್, ಯುಎಇ, ಆಸ್ಟ್ರೇಲಿಯಾ, ಇಥಿಯೋಪಿಯಾ ಮತ್ತು ಕುವೈತ್ನಲ್ಲಿ ಕೆಲಸ ಮಾಡುತ್ತಿರುವ 70 ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವೇಲ್ಸ್ನ ಕೌನ್ಸಿಲರ್ ರಾಜೀವ್ ಮೆತ್ರಿ, ಐರ್ಲೆಂಡ್ನ ಈಶ್ವರ್ ಶೇಗುಣಸಿ ಮತ್ತು ಇಂಗ್ಲೆಂಡ್ನ ಶಿವಾನಂದ ನಾಶಿಪುಡಿ ಕಾರ್ಯಕ್ರಮ ಆಯೋಜಿಸಿದ್ದರು. ಎಲ್ಲರೂ ಕಾಲೇಜಿನ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಸುಧಾ ರೆಡ್ಡಿ, ‘ಉತ್ತರ ಕರ್ನಾಟಕದಲ್ಲಿ 6 ನಸಿಂಗ್ ಕಾಲೇಜುಗಳನ್ನು ಸಂಸ್ಥೆ ಹೊಂದಿದೆ. ಪ್ರತಿ ವರ್ಷ 500ಕ್ಕೂ ಹೆಚ್ಚು ಪದವೀಧರ ದಾದಿಯರು ಹೊರಹೊಮ್ಮುತ್ತಿದ್ದಾರೆ’ ಎಂದು ತಿಳಿಸಿದರು.
ಕೋರೆ ಮಾತನಾಡಿ, ‘ದೇಶ–ವಿದೇಶಗಳಲ್ಲಿ ನೆಲೆಸಿರುವ ನಮ್ಮ ಸಂಸ್ಥೆಯ ನರ್ಸಿಂಗ್ ಹಳೆಯ ವಿದ್ಯಾರ್ಥಿಗಳು ಕೋವಿಡ್-19 ಸಂದರ್ಭದಲ್ಲಿ ಅತ್ಯಮೂಲ್ಯ ಸೇವೆ ನೀಡುತ್ತಿದ್ದಾರೆ. ಈ ಮೂಲಕ ಕೆಎಲ್ಇ ಕುಟುಂಬ ಹೆಮ್ಮೆಪಡುವಂತೆ ಮಾಡಿದ್ದಾರೆ. ನಿಜವಾಗಿಯೂ ಅವರು ಕೊರೊನಾ ಯೋಧರು’ ಎಂದರು.
‘ಕೇಂದ್ರ ಸರ್ಕಾರವು ಹೊಸ ಶಿಕ್ಷಣ ನೀತಿಗೆ ಅನುಮೋದನೆ ನೀಡಿದೆ. 5ನೇ ತರಗತಿವರೆಗೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಲು ಹೆಚ್ಚಿನ ಒತ್ತು ಕೊಡಲಾಗಿದೆ’ ಎಂದು ತಿಳಿಸಿದರು.
ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಅಮಿತ ಕೋರೆ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.