ಕೌಜಲಗಿ: ಸಮೀಪದ ಬೆಟಗೇರಿ ಗ್ರಾಮದಲ್ಲಿ ಜೂನ್ 25ರಿಂದ ಐದು ಮಂಗಳವಾರಗಳು ನಡೆದ ‘ವಾರ ಆಚರಣೆ’ ಮಂಗಳವಾರ ಮಂಗಲೋತ್ಸವ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು.
ಜನರು ಸ್ಥಳೀಯ ಎಲ್ಲ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಉಡಿ ತುಂಬಿದರು. ನೈವೇದ್ಯ ಸಮರ್ಪಿಸಿದರು. ದೇವಾಲಯ ಕಟ್ಟೆಗಳಿಗೆ ನೀರು ಹಾಕಿದರು. ಮಹಾಪ್ರಸಾದ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳಗಳೊಂದಿಗೆ ಪುರದೇವರ ಪಲ್ಲಕ್ಕಿ ಉತ್ಸವ ನೆರವೇರಿತು. ಹೊರವಲಯದಲ್ಲಿ ಊರಿನ ಸೀಮೆಗೆ ಕಟ್ಟಲಾದ ಕರಿ ಹರಿಯುವ ಸಮಾರೋಪ ಕಾರ್ಯಕ್ರಮ ಭಕ್ತಿ, ಸಂಭ್ರಮದಿಂದ ನಡೆಯಿತು.
ವಾರ ಆಚರಣೆ ಸಮಿತಿ ಸಂಚಾಲಕ ಮಾಯಪ್ಪ ಬಾಣಸಿ ಮಾತನಾಡಿ, ‘ವಾರ ಆಚರಣೆಯ 5 ಮಂಗಳವಾರಗಳಂದು ಗ್ರಾಮದ ರೈತರಾರೂ ಕೃಷಿ ಚಟುವಟಿಕೆ ಕೈಗೊಳ್ಳದೇ, ಮನೆಯಲ್ಲಿ ರೊಟ್ಟಿ ಮಾಡದೇ, ವಗ್ಗರಣೆ ಹಾಕದೇ, ಮಾಂಸಾಹಾರ ಅಡುಗೆ ತಯಾರಿಸದೇ, ಕಿರಾಣಿ, ಮದ್ಯದಂಗಡಿ, ಚಹಾಅಂಗಡಿ, ಪಾನ್ ಬೀಡಾ ಅಂಗಡಿಗಳನ್ನು ಬಂದ್ ಮಾಡಿ ಸಹಕರಿಸಿದ್ದು ಅಭಿನಂದನಾರ್ಹ’ ಎಂದರು.
ಮುಖಂಡ ಸುಭಾಷ ಕರೆಣ್ಣವರ ಮಾತನಾಡಿ, ‘ಊರಿಗೆ ಒಳಿತಾಗಲೆಂದು ಈ ಪದ್ಧತಿ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಎಲ್ಲ ಸಮುದಾಯದವರೂ ಸೇರಿ ಕಟ್ಟುನಿಟ್ಟಿನ ವ್ರತಾಚರಣೆ ಮಾಡುವ ಮೂಲಕ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದು ಶ್ಲಾಘನೀಯವಾಗಿದೆ’ ಎಂದು ತಿಳಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಸ್ಥಳೀಯರಾದ ಮಾಯಪ್ಪ ಬಾಣಸಿ, ಪುಂಡಲೀಕ ಹಾಲಣ್ಣವರ, ಸದಾಶಿವ ಕುರಿ, ಸಿದ್ರಾಮ ಜಟ್ಟೆಪ್ಪಗೋಳ, ವೀರನಾಯ್ಕ ನಾಯ್ಕರ, ಗುರಪ್ಪ ಮಾಕಾಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.