ಚಿಕ್ಕೋಡಿ: ತಾಲ್ಲೂಕಿನ ಕಲ್ಲೋಳ– ಯಡೂರ ಗ್ರಾಮಗಳ ನಡುವೆ ಕೃಷ್ಣಾ ನದಿಗೆ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ₹29 ಕೋಟಿ ಅನುದಾನದಲ್ಲಿ ಬ್ಯಾರೇಜ್ ಕಂ ಬ್ರಿಜ್ ಪೂರ್ಣಗೊಂಡಿದೆ. 2021ರಲ್ಲಿ ಮಹಾ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಬ್ಯಾರೇಜ್ ಮರು ನಿರ್ಮಾಣದಿಂದ ಮಳೆಗಾಲದಲ್ಲಿ ನದಿ ತೀರದ ಜನರು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.
50 ವರ್ಷಗಳಷ್ಟು ಹಳೆಯದಾಗಿದ್ದ ಬ್ರಿಜ್– ಬ್ಯಾರೇಜ್ ಕಿರಿದಾಗಿದ್ದರಿಂದ ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿತ್ತು. ಮಳೆಗಾಲದಲ್ಲಿ ನೀರು ಸಂಗ್ರಹಿಸಿಟ್ಟರೂ ಬೇಸಿಗೆ ಕಾಲದಲ್ಲಿ ಬ್ಯಾರೇಜ್ನಲ್ಲಿ ಸಂಗ್ರಹವಾಗಿದ್ದ ನೀರು ಕೂಡಲೇ ಖಾಲಿಯಾಗುತ್ತಿತ್ತು. ಹೀಗಾಗಿ ಪ್ರತಿ ವರ್ಷ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿತ್ತು.
ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆ ಎಂಬಂತೆ ಕಿರಿದಾದ ಬ್ಯಾರೇಜ್ ಹೇಗೋ ಸ್ವಲ್ಪ ಅನುಕೂಲವಾಗಿದ್ದರೂ ಕಳೆದ ಐದು ವರ್ಷಗಳ ಹಿಂದೆ ಪ್ರವಾಹದಿಂದ ಕೊಚ್ಚಿ ಹೋಗಿದ್ದರಿಂದ ಮಳೆಗಾಲದ ನಂತರ ಹನಿ ನೀರಿಗೂ ತತ್ವಾರ ಪಡುವಂತಾಗಿತ್ತು. ಶಾಸಕ ಗಣೇಶ ಹುಕ್ಕೇರಿ ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಅವರ ಪ್ರಯತ್ನದಿಂದ ಸೇತುವೆ ಮರು ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಿದೆ.
ಏನು ಪ್ರಯೋಜನ: ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ 2023ರ ಮಾರ್ಚ್ 8ರಂದು ಬ್ಯಾರೇಜ್ ಕಾಮಗಾರಿ ಆರಂಭಗೊಂಡಿದೆ. 192 ಮೀಟರ್ ಉದ್ದ, 8.5 ಮೀಟರ್ ಎತ್ತರದ ಬ್ಯಾರೇಜ್ ಇದಾಗಿದೆ. ನೂತನ ಬ್ಯಾರೇಜಿಗೆ 32 ಸ್ಲ್ಯಾಬ್ ಇದ್ದು, 64 ಗೇಟ್ಗಳನ್ನು ಅಳವಡಿಸಲಾಗಿದೆ.
0.6 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ನೂತನ ಬ್ಯಾರೇಜಿನಿಂದ ಚಿಕ್ಕೋಡಿ ತಾಲ್ಲೂಕಿನ ಯಡೂರ, ಕಲ್ಲೋಳ, ಚಂದೂರ, ಮಾಂಜರಿ, ಅಂಕಲಿ, ಕಾಗವಾಡ ತಾಲ್ಲೂಕಿನ ಜುಗೂಳ, ಮಂಗಾವತಿ, ಶಹಾಪೂರ, ಮಹಾರಾಷ್ಟ್ರದ ದತ್ತವಾಡ, ದಾನವಾಡ, ಸೈನಿಕ ಟಾಕಳಿ ಮುಂತಾದ ಗ್ರಾಮಗಳ ಜಮೀನುಗಳು ನೀರಾವರಿಗೆ ಅನುಕೂಲವಾಗಲಿದೆ.
ಕಲ್ಲೋಳ– ಯಡೂರ ನಡುವಿನ ಕೃಷ್ಣಾ ನದಿಯ ನೂತನ ಬ್ರಿಜ್– ಬ್ಯಾರೇಜಿನ ಕಾಮಗಾರಿ ಪೂರ್ಣಗೊಂಡಿದ್ದರಿಂದ ಮಳೆಗಾಲದಲ್ಲಿ ಸಂಚಾರಕ್ಕೆ ಅನುಕೂಲವಾಗಲಿದೆ. ಕಳೆದ 5 ವರ್ಷಗಳಿಂದ ಸುತ್ತು ಬಳಸಿಕೊಂಡು ಸಂಚಾರ ಮಾಡಬೇಕಿದ್ದ ಪ್ರಮೇಯ ಇನ್ನಿಲ್ಲದಂತಾಗಿದೆ. ನೂತನ ಬ್ರಿಜ್ ಕಮ್ ಬ್ಯಾರೇಜಿನಿಂದ ಸುಕ್ಷೇತ್ರ ಯಡೂರ ದೇವಸ್ಥಾನಕ್ಕೆ ಹೋಗಿ ಬರಲು ಭಕ್ತರಿಗೆ ಅನುಕೂಲವಾಗಲಿದೆ. ಬ್ರಿಡ್ಜ್ ನಿಂದ ಸಂಚಾರಕ್ಕೆ, ಬ್ಯಾರೇಜಿನಿಂದ ನೀರಾವರಿಗೆ ಅನುಕೂಲವಾಗಲಿದೆ.
ಬೇಸಿಗೆಯಲ್ಲಿ ನದಿ ಬತ್ತಿ ಬೆಳೆ ಒಣಗಿ ಹೋಗುತ್ತಿತ್ತು. ಮಳೆಗಾಲದಲ್ಲಿ ಸಂಚಾರಕ್ಕೆ ಸಂಚಕಾರ ಉಂಟಾಗಿತ್ತು. ಕಲ್ಲೋಳ– ಯಡೂರ ಬ್ಯಾರೇಜಿನಿಂದ ಸಂಕಷ್ಟ ತಪ್ಪಿದೆಮಹೇಶ ಕಾಗವಾಡೆ ಯಡೂರ ನಿವಾಸಿ
ಬೇಸಿಗೆಯಲ್ಲಿ ನಿರೀಕ್ಷಿತ ಪ್ರಮಾಣದಷ್ಟು ನೀರು ಹಿಡಿದಿಟ್ಟುಕೊಳ್ಳಲು ಹಳೆಯ ಸೇತುವೆಯಿಂದ ಸಾಧ್ಯವಾಗುತ್ತಿರಲಿಲ್ಲ. ಹೊಸ ಬ್ಯಾರೇಜಿನಿಂದ ಸಮಸ್ಯೆ ನೀಗಿದೆಪ್ರಕಾಶ ಹುಕ್ಕೇರಿ ದೆಹಲಿ ವಿಶೇಷ ಪ್ರತಿನಿಧಿ ಕರ್ನಾಟಕ ಸರ್ಕಾರ
ಕೆಆರ್ಡಿಸಿಎಲ್ ಯೋಜನೆ ಅಡಿ ಕಲ್ಲೋಳ– ಯಡೂರ ಗ್ರಾಮದ ಬಳಿ ನಿರ್ಮಿಸಿದ ಬ್ರಿಜ್– ಬ್ಯಾರೇಜ್ ಕಾಮಗಾರಿ ಪೂರ್ಣಗೊಂಡು ಜನ ಹರ್ಷದಲ್ಲಿದ್ದಾರೆ. ಆದರೆ ಇದರ ಸೇತುವೆ ಕಾಮಗಾರಿ ಆರಂಭವಾಗಿ ಎಂಟು ವರ್ಷಗಳಾದರೂ ಮುಗಿದಿಲ್ಲ. ₹27.89 ಕೋಟಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಯು ಪೂರ್ಣಗೊಂಡಲ್ಲಿ ಮಹಾ ಮಳೆಯಿಂದ ಎಷ್ಟೇ ಪ್ರಮಾಣದಲ್ಲಿ ಪ್ರವಾಹ ಬಂದರೂ ಮುಳುಗಡೆಯಾಗುವುದಿಲ್ಲ. ಹೀಗಾಗಿ ಜನ ನಿರೀಕ್ಷೆಯಲ್ಲೇ ಕಾಲ ಕಳೆಯುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.