ಬೆಳಗಾವಿಯ ವಿದ್ಯಾ ನಗರದಲ್ಲಿರುವ ಸಿದ್ಧಲಿಂಗಪ್ಪ ನಿಂಗಪ್ಪ ಬಾನಸಿ ಅವರ ಬಂಗಲೆ
ಬೆಳಗಾವಿ: ಜಿಲ್ಲೆಯ ಐದು ಸ್ಥಳಗಳ ಮೇಲೆ ಶನಿವಾರ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು, ಮೂವರು ಅಧಿಕಾರಿಗಳ ಆಸ್ತಿ ಜಾಲಾಡಿದ್ದಾರೆ. ಒಟ್ಟು ₹8.57 ಕೋಟಿಗೂ ಅಧಿಕ ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.
ಇಲ್ಲಿನ ದೇವರಾಜ್ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸಿದ್ಧಲಿಂಗಪ್ಪ ನಿಂಗಪ್ಪ ಬಾನಸಿ ಅವರಿಗೆ ವಿದ್ಯಾನಗರದ ಮನೆ, ಕಚೇರಿ ಹಾಗೂ ರಾಯಬಾಗ ತಾಲ್ಲೂಕಿನ ಬೆಕ್ಕೇರಿ ಗ್ರಾಮದಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದು ಒಟ್ಟು ₹1.45 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಪಡೆದಿದ್ದಾರೆ.
₹37.66 ಲಕ್ಷ ಮೌಲ್ಯದ ಸೈಟುಗಳು, ₹65 ಲಕ್ಷ ಮೌಲ್ಯದ ಮನೆ ಹಾಗೂ ಇತರ ವಸ್ತುಗಳು ಸೇರಿ ₹1.02 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ₹18 ಸಾವಿರ ನಗದು, ₹34.64 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹10.60 ಲಕ್ಷ ಮೌಲ್ಯದ ಕಾರ್ ಸೇರಿ ಒಟ್ಟು ₹45.43 ಲಕ್ಷ ಮೌಲ್ಯದ ಚರಾಸ್ತಿ ಸಿಕ್ಕಿದೆ.
ಧಾರವಾಡದ ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಎಚ್.ಸಿ. ಸುರೇಶ ಅವರ ಬೆಳಗಾವಿಯ ಹನುಮಾನ್ ನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಒಟ್ಟು ₹3.62 ಕೋಟಿಗೂ ಅಧಿಕ ಆಸ್ತಿ ಪತ್ತೆಯಾಗಿದೆ.
ಇದರಲ್ಲಿ ₹1.90 ಕೋಟಿ ಮೌಲ್ಯದ ಮನೆ ಹಾಗೂ ಫಾರ್ಮ್ಹೌಸ್, ₹13.44 ಲಕ್ಷ ಮೌಲ್ಯದ ಎರಡು ನಿವೇಶನ, ₹55.50 ಲಕ್ಷ ಮೌಲ್ಯದ ನಾಲ್ಕು ವಾಣಿಜ್ಯ ಮಳಿಗೆ, ₹35.36 ಲಕ್ಷ 11 ಎಕರೆ ಕೃಷಿ ಜಮೀನು, ₹76.60 ಸಾವಿರ ನಗದು, ಬ್ಯಾಂಕಿನಲ್ಲಿಟ್ಟ ₹1.65 ಕೋಟಿಯ ಎಫ್.ಡಿ, ₹21.58 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹2.40 ಲಕ್ಷ ಬೆಲೆಬಾಳುವ ಬೆಳ್ಳಿ ಸಾಮಗ್ರಿಗಳು, ₹26 ಲಕ್ಷ ಬೆಲೆಬಾಳುವ ಮೂರು ಕಾರುಗಳು, ₹25 ಲಕ್ಷಕ್ಕೂ ಅಧಿಕ ಬೆಲೆಬಾಳುವ ಪೀಠೋಪಕರಣಗಳನ್ನೂ ಲೋಕಾಯುಕ್ತರು ವಶಕ್ಕೆ ಪಡೆದಿದ್ದಾರೆ.
ಮತ್ತೊಂದೆಡೆ, ಗದಗ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ ಅವರಿಗೆ ಸೇರಿದ, ಇಲ್ಲಿನ ಮನೆ, ಮಳಿಗೆ ಹಾಗೂ ವಿವಿಧ ಸಂಬಂಧಿಗಳ ಮನೆ ಮೇಲೆ ದಾಳಿ ಮಾಡಲಾಗಿದೆ. ಒಟ್ಟು ₹3.50 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಲಾಗಿದೆ.
₹2.30 ಕೋಟಿ ಮೌಲ್ಯದ ಎರಡು ಬಂಗಲೆ, ₹25.50 ಲಕ್ಷ ಮೌಲ್ಯದ ನಾಲ್ಕು ನಿವೇಶನಗಳು, ₹13 ಲಕ್ಷ ಬೆಲೆಬಾಳುವ ಮೂರು ಎಕರೆ ಜಮೀನು, ₹21.50 ಲಕ್ಷ ನಗದು, ₹23.83 ಲಕ್ಷ ಮೌಲ್ಯದ ಚಿನ್ನಾಭರಣ, ₹3.70 ಲಕ್ಷ ಮೌಲ್ಯದ ಬೆಳ್ಳಿ ಸಲಕರಣೆ, ₹12.30 ಲಕ್ಷ ಬೆಲೆಬಾಳುವ ಕಾರು, ₹5 ಲಕ್ಷದ ಪೀಠೋಪಕರಣಗಳು ಇದರಲ್ಲಿ ಸೇರಿವೆ.
ಲೋಕಾಯುಕ್ತ ಎಸ್ಪಿ ಹನುಮಂತರಾಯ ಅವರ ನೇತೃತ್ವದಲ್ಲಿ ಅಧಿಕಾರಿಗಳು ಐದು ತಂಡಗಳು ಏಕಕಾಲಕ್ಕೆ ಈ ದಾಳಿಯಲ್ಲಿ ಪಾಲ್ಗೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.