ಬೆಳಗಾವಿ: ರಾಯಬಾಗ ತಾಲ್ಲೂಕಿನ ಸವಸುದ್ದಿ ಗ್ರಾಮದಲ್ಲಿ ಮಂಗಳವಾರ ಆಸ್ತಿಗಾಗಿ ನಡೆದ ಜಗಳದಲ್ಲಿ, ವ್ಯಕ್ತಿಯೊಬ್ಬರು ತಮ್ಮ ರಿವಾಲ್ವರ್ನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ಗುಂಡು ಯಾರಿಗೂ ತಗುಲಿಲ್ಲ.
‘ಶ್ರೀಶೈಲ ಬಾಳಪ್ಪ ಪಾಟೀಲ ಎನ್ನುವವರು ಪರವಾನಗಿ ಹೊಂದಿದ ರಿವಾಲ್ವರ್ನಿಂದ ಗುಂಡು ಹಾರಿಸಿದವರು. ಇವರೊಂದಿಗೆ ಜಗಳದಲ್ಲಿದ್ದ ಸಹೋದರ ಸಂಬಂಧಿ ಮಹಾದೇವ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಶ್ರೀಶೈಲ ಹಾಗೂ ಮಹಾದೇವ ಅವರ ಮಧ್ಯೆ ಆಸ್ತಿಗೆ ಸಂಬಂಧಿಸಿ ಮೇಲಿಂದ ಮೇಲೆ ತಂಟೆ–ತಕರಾರುಗಳು ನಡೆಯುತ್ತಿದ್ದವು. ಮಂಗಳವಾರ ಕಬ್ಬಿನ ಗದ್ದೆಯಲ್ಲಿ ಮತ್ತೆ ಜಗಳ ಆರಂಭವಾಯಿತು. ಈ ವೇಳೆ ರಿವಾಲ್ವರ್ ಹೊರತೆಗೆದ ಶ್ರೀಶೈಲ ಗುಂಡು ಹಾರಿಸಿದರು. ಹತ್ತಿರದಲ್ಲೇ ಇದ್ದ ಕೆಲವರು ಅವರ ಕೈಯಿಂದ ರಿವಾಲ್ವರ್ ಕಿತ್ತುಕೊಳ್ಳಲು ಮುಂದಾದರು. ನೂಕಾಟದಲ್ಲಿ ಕೆಳಗೆ ಬಿದ್ದ ಶ್ರೀಶೈಲ ಅವರ ಮುಖ ಹಾಗೂ ಭುಜಕ್ಕೆ ಕಬ್ಬು ಕಟಾವು ಮಾಡಿದ ತುಂಡುಗಳು ಚುಚ್ಚಿ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.
ಹಾರೂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.