ADVERTISEMENT

ಬೆಳಗಾವಿ | ಅಪಘಾತ ಎಂಬಂತೆ ಬಿಂಬಿಸಿ ಕೊಲೆ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 12:29 IST
Last Updated 10 ಮಾರ್ಚ್ 2025, 12:29 IST
<div class="paragraphs"><p>ಬಂಧನ</p></div>

ಬಂಧನ

   

ಪ್ರಾತಿನಿಧಿಕ ಚಿತ್ರ

ಬೆಳಗಾವಿ: ರಾಮದುರ್ಗ ತಾಲ್ಲೂಕಿನ ಕಟಕೋಳ ಠಾಣೆ ವ್ಯಾಪ್ತಿಯಲ್ಲಿ ಫೆ.25ರ ರಾತ್ರಿ ನಡೆದ ಸಣ್ಣರಾಮಪ್ಪ ಪತ್ತಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ADVERTISEMENT

ಕಟಕೋಳದ ಶಂಕರ ಜಾಧವ, ಚಿಕ್ಕೋಡಿಯ ಸುಲ್ತಾನ್‌ ಕಿಲ್ಲೇದಾರ, ರಾಹುಲ ಬಾಗೇವಾಡಿ ಮತ್ತು ನಿಪ್ಪಾಣಿ ಟಿಪ್ಪು ಮುಜಾವರ ಬಂಧಿತರು.

‘ಸಣ್ಣರಾಮಪ್ಪ ಪತ್ತಾರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರಂಭದಲ್ಲಿ ತಿಳಿಸಲಾಗಿತ್ತು. ಆದರೆ, ಪೊಲೀಸರು ಪರಿಶೀಲಿಸಿದಾಗ, ಅದು ಅಪಘಾತ ಅಲ್ಲ ಎಂಬುದು ಸಂಶಯ ಬಂದಿತ್ತು. ಇದು ಅಪಘಾತವಲ್ಲ ಎಂದು ಕುಟುಂಬಸ್ಥರೂ ಸಂಶಯ ವ್ಯಕ್ತಪಡಿಸಿದ್ದರು. ಮರಣೋತ್ತರ ಪರೀಕ್ಷಾ ವರದಿಯಲ್ಲೂ ಕೊಲೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಂಡಾಗ ಕೊಲೆ ಮಾಡಿರುವುದು ತಿಳಿದುಬಂದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

‘ಮಹಾರಾಷ್ಟ್ರದಲ್ಲಿ ನೆಲೆಸಿರುವ ಘಾಟಗೆ ಅವರಿಗೆ ಸೇರಿದ 7 ಎಕರೆ, 2 ಗುಂಟೆ ಕೃಷಿಭೂಮಿ ಕಟಕೋಳದಲ್ಲಿ ಇತ್ತು. ಶಂಕರ ಜಾಧವ ಅದನ್ನು ಉಳುಮೆ ಮಾಡುತ್ತಿದ್ದರು. ಉಳುವವನೇ ಭೂಮಿ ಒಡೆಯ ಯೋಜನೆಯಡಿ ಅದನ್ನು ಪಡೆಯಲು ಪ್ರಯತ್ನಿಸಿದ್ದರು. ಆದರೆ, ನ್ಯಾಯಾಲಯದಲ್ಲಿ ಘಾಟಗೆ ಪರವಾಗಿ ತೀರ್ಪು ಬಂದಿತ್ತು. ಈ ಮಧ್ಯೆ, ಸಣ್ಣರಾಮಪ್ಪ ಪತ್ತಾರ ಈ ಭೂಮಿ ಉಳುಮೆ ಮಾಡುತ್ತಿದ್ದರು. ಈ ವಿಷಯವಾಗಿ ಶಂಕರ ಮತ್ತು ಸಣ್ಣರಾಮಪ್ಪ ಮಧ್ಯೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ’ ಎಂದರು.

‘ಸಣ್ಣರಾಮಪ‍್ಪ ಹತ್ಯೆ ಮಾಡಲು ಶಂಕರ ಎಂಬಾತ, ಸುಲ್ತಾನ್‌ ಕಿಲ್ಲೇದಾರ ಮತ್ತು ಆತನ ಗೆಳೆಯರಿಗೆ ₹2.5 ಲಕ್ಷ ಸುಪಾರಿ ಕೊಟ್ಟಿದ್ದ. ಈಗಾಗಲೇ ₹1.5 ಲಕ್ಷ ಹಣ ಕೊಟ್ಟಿದ್ದ. ಈ ಹಿಂದೆ ನಾಲ್ಕೈದು ಬಾರಿ ಸಣ್ಣರಾಮಪ್ಪ ಕೊಲೆಗೆ ಪ್ರಯತ್ನ ನಡೆದಿತ್ತು’ ಎಂದು ತಿಳಿಸಿದರು.

ಸಿಪಿಐ ಐ.ಆರ್‌.ಪಟ್ಟಣಶೆಟ್ಟಿ, ಪಿಎಸ್‌ಐ ಬಸವರಾಜ ಕೊಣ್ಣೂರೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ಬೈಲಹೊಂಗದಲ್ಲಿ ನಡೆದ ಕೊಲೆ: ಓರ್ವನ ಬಂಧನ

‘ಬೈಲಹೊಂಗಲ ತಾಲ್ಲೂಕಿನ ದೊಡವಾಡ ಠಾಣೆ ವ್ಯಾಪ್ತಿಯ ಗುಡಿಕಟ್ಟೆ ಹೊರವಲಯದಲ್ಲಿ ಮಾರ್ಚ್ 5ರಂದು ಬಾಗಲಕೋಟೆ ಜಿಲ್ಲೆಯ ಕಟಗೇರಿಯ ಕಟ್ಟಡ ಕಾರ್ಮಿಕ ಬಸವರಾಜ ಕುಂಬಾರ(48) ಅವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪ್ರಕರಣ ಸಂಬಂಧ, ಒಬ್ಬನನ್ನು ಬಂಧಿಸಲಾಗಿದೆ’ ಎಂದು ಭೀಮಾಶಂಕರ ಗುಳೇದ ಹೇಳಿದರು.

‘ಪೈಲ್ವಾನ್ ಬಸವರಾಜ ಕಲ್ಲಯ್ಯ ಪೂಜಾರ(58). ಈತ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನಡೆದ ವಿವಿಧ ಕುಸ್ತಿ ಪಂದ್ಯಗಳಲ್ಲಿ ಗೆದ್ದಿದ್ದ. ಹೊಲದಲ್ಲಿ ಮನೆ ಕಟ್ಟುವ ವಿಚಾರವಾಗಿ ಸಣ್ಣ ಕಾರಣಕ್ಕೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.