ಬೆಳಗಾವಿ: ನಗರದಲ್ಲಿ ಕೈಗಾರಿಕಾ ಬೆಳವಣಿಗೆಗೆ ಅಗತ್ಯವಾದ ಸೌಲಭ್ಯ ಒದಗಿಸುವಲ್ಲಿ ಸರ್ಕಾರ ನಿರ್ಲಕ್ಷ್ಮ ವಹಿಸುತ್ತಾ ಬಂದಿರುವುದನ್ನು ಕೈಗಾರಿಕೋದ್ಯಮಿಗಳು ತೀವ್ರವಾಗಿ ಖಂಡಿಸಿದ್ದಾರೆ. ‘ಇನ್ನಾದರೂ ಸ್ಪಂದನೆ ದೊರೆಯದಿದ್ದಲ್ಲಿ ಮುಂಬರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಬಹಿಷ್ಕರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಬೆಳಗಾವಿ ಕೈಗಾರಿಕಾ ಹಾಗೂ ವಾಣಿಜ್ಯ ಮಂಡಳಿ (ಬಿಸಿಸಿಐ) ಮತ್ತು ಬಿಇಎಂಸಿಐಇಎಲ್ (ಬೆಳಗಾವಿ ಉತ್ಪಾದಕ ಸಹಕಾರ ಕೈಗಾರಿಕೆಗಳ ಎಸ್ಟೇಟ್ ಲಿ.) ಪದಾಧಿಕಾರಿಗಳು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
‘ನಗರವು ಪ್ರಮುಖ ಕೈಗಾರಿಕಾ ಪ್ರಗತಿಯ ಕೇಂದ್ರವಾಗಿದೆ ಹಾಗೂ ಬೆಂಗಳೂರು ನಂತರ ಹೆಚ್ಚಿನ ವರಮಾನ ನೀಡುತ್ತಿದೆ. ಉದ್ಯಮಬಾಗ ಹಾಗೂ ಮಚ್ಚೆ ಕೈಗಾರಿಕಾ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯಮಗಳಿದ್ದು, 40ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಹಾಗೂ ಎಂಜಿನಿಯರ್ಗಳು ಕೆಲಸ ಮಾಡುತ್ತಿದ್ದಾರೆ. ಗಗನಯಾನ ಯೋಜನೆ, ಫೌಂಡ್ರಿ, ಯಂತ್ರಗಳಿಗೆ ಬೇಕಾದವು, ಆಟೊಮೊಬೈಲ್ ಕ್ಷೇತ್ರಕ್ಕೆ ಅಗತ್ಯವಾದ ಉತ್ಪನ್ನಗಳು ಹಾಗೂ ಉಪಕರಣಳನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ. ರಫ್ತು ವಿಭಾಗದಲ್ಲೂ ಅಪಾರ ಕೊಡುಗೆ ನೀಡುತ್ತಿದೆ. ಆದರೂ ಕಡೆಗಣಿಸಿರುವುದು ಸರಿಯಲ್ಲ’ ಎಂದು ಅಧ್ಯಕ್ಷ ಶ್ರೀಧರ ಉಪ್ಪಿನ ಹಾಗೂ ಪ್ರಧಾನ ಕಾರ್ಯದರ್ಶಿ ಹೇಮೇಂದ್ರ ಪೋರವಾಲ ತಿಳಿಸಿದ್ದಾರೆ.
‘ಈ ಕೈಗಾರಿಕಾ ಪ್ರದೇಶಗಳು ರಸ್ತೆ, ಚರಂಡಿ, ಬೀದಿದೀಪಗಳು, ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಮೊದಲಾದ ಮೂಲಸೌಲಭ್ಯಗಲಿಲ್ಲದೆ ಬಳಲುತ್ತಿವೆ. ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ₹ 56 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಆದರೆ, ಸರ್ಕಾರದಿಂದ ಇದಕ್ಕೂ ಮನ್ನಣೆ ದೊರೆತಿಲ್ಲ’ ಎಂದು ದೂರಿದ್ದಾರೆ.
‘ಸರ್ಕಾರವು ಬೇಡಿಕೆ ಈಡೇರಿಸುವ ಮೂಲಕ, ಚುನಾವಣೆ ಬಹಿಷ್ಕಾರಕ್ಕೆ ಅವಕಾಶ ನೀಡಬಾರದು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.