ADVERTISEMENT

ಉಗರಖೋಡ ಪಂಚಾಯ್ತಿಯಲ್ಲಿ ಅಧ್ಯಕ್ಷ- ಸದಸ್ಯನ ಹೊಡೆದಾಟ!

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 14:22 IST
Last Updated 22 ಏಪ್ರಿಲ್ 2024, 14:22 IST
ಚನ್ನಮ್ಮನ ಕಿತ್ತೂರು ಉಗರಖೋಡ ಪಂಚಾಯ್ತಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ಹೊಡೆದಾಟದ ದೃಶ್ಯ
ಚನ್ನಮ್ಮನ ಕಿತ್ತೂರು ಉಗರಖೋಡ ಪಂಚಾಯ್ತಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ಹೊಡೆದಾಟದ ದೃಶ್ಯ   

ಚನ್ನಮ್ಮನ ಕಿತ್ತೂರು: ಗ್ರಾಮ ಪಂಚಾಯ್ತಿ ವಾರ್ಡಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸದಸ್ಯನೊಬ್ಬ ಕೊರೆಸಿದ ಕೊಳವೆ ಬಾವಿ ಬಿಲ್ ಮಂಜೂರು ಮಾಡುವಂತೆ ನಡೆದ ಮಾತಿನ ನಡುವೆ ನಡೆದ ಚಕಮಕಿಯು ಪಂಚಾಯ್ತಿ ಅಧ್ಯಕ್ಷ ಮತ್ತು ಸದಸ್ಯನ ನಡುವೆ ಹೊಡೆದಾಟದೊಂದಿಗೆ ಮುಕ್ತಾಯ ಕಂಡಿದೆ.

ತಾಲ್ಲೂಕಿನ ಉಗರಖೋಡ ಗ್ರಾಮ ಪಂಚಾಯ್ತಿ ವಾರ್ಡಿನಲ್ಲಿ ಸದಸ್ಯ ನಿಂಗರಾಜ ಅಂಬಡಗಟ್ಟಿ ಎಂಬುವರು ಕೊಳವೆ ಬಾವಿ ಕೊರೆಸಿದ್ದರು. ಅದರ ಬಿಲ್ ಮಂಜೂರು ಮಾಡುವಂತೆ ಒತ್ತಾಯಿಸುತ್ತಿದ್ದರು. ಪಿಡಿಪ ಎಲ್ಲರ ಸದಸ್ಯರ ಸಭೆ ಕರೆದಾಗ ಅಧ್ಯಕ್ಷ ಶಫಿಕ್ ಹವಾಲ್ದಾರ್ ಹಾಗೂ ಈ ಸದಸ್ಯನ ಮಧ್ಯೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿ ಇಬ್ಬರೂ ಕೈ ಮಿಲಾಯಿಸಿದ್ದಾರೆ. ಇಬ್ಬರ ನಡುವೆ ನಡೆದ ಹೊಡೆದಾಟವನ್ನು ಕೆಲವರು ಮೂಕ ಪ್ರೇಕ್ಷಕರಾಗಿ ವೀಕ್ಷಿಸುತ್ತ ನಿಂತರು. ಮತ್ತೆ ಕೆಲವರು ಬಿಡಿಸಲು ಹೋದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಈ ಹೊಡೆದಾಟದ ದೃಶ್ಯಗಳು ಪಂಚಾಯ್ತಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಲವರ ಮೊಬೈಲ್‌ ಫೋನ್‌ಗಳಲ್ಲಿ ಹರಿದಾಡುತ್ತಿವೆ.

ADVERTISEMENT

‘ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಪಿಡಿಒ ಸಭೆ ಹೇಗೆ ಕರೆದರು ಎಂಬುದು ಇಲ್ಲಿ ಪ್ರಶ್ನೆಯಾಗಿದೆ’ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

‘ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸದಸ್ಯ ನಿಂಗರಾಜ ಅಂಬಡಗಟ್ಟಿ ಕೊಳವೆ ಬಾವಿ ಕೊರೆಸಿ ಮತದಾರರ ಮೇಲೆ ಪ್ರಭಾವ ಬೀರಲು ಹೊರಟಿದ್ದಾರೆ’ ಎಂದೂ ಉಗರಖೋಡ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಫಿಕ್ ಹವಾಲ್ದಾರ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.