ರಾಮದುರ್ಗ (ಬೆಳಗಾವಿ ಜಿಲ್ಲೆ): ಇಲ್ಲಿನ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಕೋವಿಡ್ ಲಾಕ್ಡೌನ್ ನಡುವೆಯೇ ಹೋಮ–ಹವನ ನಡೆಸುವ ಮೂಲಕ ತಮ್ಮ 69ನೇ ಹುಟ್ಟುಹಬ್ಬವನ್ನು ಮಂಗಳವಾರ ಆಚರಿಸಿಕೊಂಡಿದ್ದಾರೆ.
ವೆಂಕಟೇಶ್ವರ ದೇವಸ್ಥಾನದಲ್ಲಿ ಪತ್ನಿ, ಪುತ್ರಿ, ಸೊಸೆ, ಅಣ್ಣನ ಮಕ್ಕಳು ಮತ್ತು ಮೊಮ್ಮಕ್ಕಳ ಜೊತೆಗೂಡಿ ಧಾರ್ಮಿಕ ಕಾರ್ಯಕ್ರಮ ನಡೆಸಿದ್ದಾರೆ. ಪಾಲ್ಗೊಂಡಿದ್ದವರು ಸರಿಯಾಗಿ ಮಾಸ್ಕ್ ಧರಿಸಿರಲಿಲ್ಲ ಮತ್ತು ಅಂತರ ಕಾಯ್ದುಕೊಂಡಿರಲಿಲ್ಲ. ಅರ್ಚಕರಾದ ವಾಮನಾಚಾರ್ಯ ಮತ್ತು ವಿಜಯೇಂದ್ರಾಚಾರ್ಯರು ವಿಧಿ–ವಿಧಾನಗಳನ್ನು ನೆರವೇರಿಸಿದರು.
ಸೋಂಕು ತೀವ್ರವಾಗಿ ಹರಡಲಾರಂಭಿಸುತ್ತಿದ್ದಂತೆ, ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ದೈನಂದಿನ ಪೂಜೆ ಸಲ್ಲಿಸಲು ಅರ್ಚಕರಿಗಷ್ಟೆ ಅವಕಾಶವಿತ್ತು. ಆದರೆ, ಭಕ್ತರಿಗೆ ನಿರ್ಬಂಧವಿರುವ ಅವಧಿಯಲ್ಲೇ ಶಾಸಕರು ಕುಟುಂಬ ಸಮೇತ ಭೇಟಿ ನೀಡಿ ಹೋಮ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಟೀಕೆ ಕೂಡ ವ್ಯಕ್ತವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.