ಖೇಮಲಾಪುರ (ಬೆಳಗಾವಿ ಜಿಲ್ಲೆ): ಪ್ರವಾಹ ಬಂದು ಮೂರು ತಿಂಗಳು ಕಳೆದಿದ್ದರೂ ರಾಯಬಾಗ ತಾಲ್ಲೂಕು ಖೇಮಲಾಪುರ ಗ್ರಾಮದ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗೆ ಶೆಡ್ ಭಾಗ್ಯ ಸಿಕ್ಕಿಲ್ಲ. ಶಿಕ್ಷಕರು ಅಲ್ಲಿನ ದೇವಾಲಯಗಳ ಆವರಣದಲ್ಲಿ ಮಕ್ಕಳಿಗೆ ತರಗತಿಗಳನ್ನು ನಡೆಸುತ್ತಿದ್ದಾರೆ.
ಪ್ರವಾಹ ಇಳಿದ ಬಳಿಕ, ಶಿಥಿಲಗೊಂಡಿರುವ ಕೊಠಡಿಗಳಲ್ಲಿ ತರಗತಿ ನಡೆಸದಂತೆ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಅದರಂತೆ ಶಿಕ್ಷಕರು ಅಲ್ಲಿನ ಎಸ್ಡಿಎಂಸಿಯವರ ಸಹಕಾರದಿಂದ ಗ್ರಾಮದ ದೇವಾಲಯಗಳಲ್ಲಿ ತರಗತಿ ತೆಗೆದುಕೊಳ್ಳುತ್ತಿದ್ದಾರೆ.
‘ಇಲ್ಲಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡುವಂತೆ ಕೇಳಿಕೊಂಡರೂ ಯಾರೊಬ್ಬರೂ ಸ್ಪಂದಿಸಿಲ್ಲ. ಜನಪ್ರತಿನಿಧಿಗಳಂತೂ ಪರಿಸ್ಥಿತಿ ಅವಲೋಕಿಸಿ ಸಾಂತ್ವನ ಹೇಳುವುದಕ್ಕೂ ಬಂದಿಲ್ಲ’ ಎಂದು ಪಾಲಕರು ಆರೋಪಿಸಿದರು. 150 ಮಕ್ಕಳು ಸರಿಯಾದ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ. ದಿಕ್ಕಿಗೊಂದು ತರಗತಿ ನಡೆಯುತ್ತಿದೆ!
‘ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಶಾಲೆಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡುವ ಭರವಸೆ ಕೊಟ್ಟಿದ್ದರು. ಆದರೆ, ಅದು ಈಡೇರಿಲ್ಲ. ಎಂಜಿನಿಯರ್ ಮೂಲಕ ಮನವಿ ಮಾಡಿದರೂ ಕೆಲಸ ಆರಂಭವಾಗಿಲ್ಲ. ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗೆ ಇಲಾಖೆಯ ಅಧಿಕಾರಿಗಳೇ ನೇರ ಹೊಣೆ’ ಎಂದು ಎಸ್ಡಿಎಂಸಿ ಅಧ್ಯಕ್ಷ ಶ್ರೀಶೈಲ ಗುಡೋಡಗಿ ದೂರಿದರು.
‘ಶತಮಾನ ಕಂಡ ಶಾಲೆಯ ದುರಸ್ತಿ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ವಾರದಲ್ಲಿ ಕೆಲಸ ಆರಂಭವಾಗದಿದ್ದಾರೆ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಪಾಲರಕು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.