ADVERTISEMENT

ಮಠಗಳಿಂದ ಸಾಮಾಜಿಕ ಕಾರ್ಯ: ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 14:28 IST
Last Updated 7 ನವೆಂಬರ್ 2021, 14:28 IST
ಹಂದಿಗುಂದದಲ್ಲಿ ಶನಿವಾರ ನಡೆದ ಸಭೆಯಲ್ಲಿ ಶೇಗುಣಸಿಯ ಮಹಾಂತ ದೇವರು ಮಾತನಾಡಿದರು. ಶಾಸಕ ಪಿ. ರಾಜೀವ ಹಾಗೂ ಮಠಾಧೀಶರು ಇದ್ದಾರೆ
ಹಂದಿಗುಂದದಲ್ಲಿ ಶನಿವಾರ ನಡೆದ ಸಭೆಯಲ್ಲಿ ಶೇಗುಣಸಿಯ ಮಹಾಂತ ದೇವರು ಮಾತನಾಡಿದರು. ಶಾಸಕ ಪಿ. ರಾಜೀವ ಹಾಗೂ ಮಠಾಧೀಶರು ಇದ್ದಾರೆ   

ಹಂದಿಗುಂದ: ‘ಮಠಾಧೀಶರು ಸಮಾಜದ ಸಂಘಟಕರಾಗಿ, ಆಧುನಿಕ ವಚನಕಾರರಾಗಿ, ಸೃಜನಶೀಲ ಸಾಹಿತಿಗಳಾಗಿ ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅಂಥವರ ಸಾಲಿನಲ್ಲಿ ಹಂದಿಗುಂದ ಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ನಿಲ್ಲುತ್ತಾರೆ. ಸಾಕಷ್ಟು ಪ್ರಗತಿಪರ ಕಾರ್ಯಗಳನ್ನು ಮಾಡಿ ಜನರ ಮೆಚ್ಚುಗೆಗೆ ಅವರು ಪಾತ್ರರಾಗಿದ್ದಾರೆ’ ಎಂದು ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಿದ್ದೇಶ್ವರ ಮಠದ ಲೋಕಾರ್ಪಣೆ, ಬಸವಪುರಾಣ ಹಾಗೂ ಗುರುವಂದನಾ ಸಮಾರಂಭದ ಅಂಗವಾಗಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕದ ಮಠಾಧೀಶರು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾ, ಸಮಾಜದ ಒಳಿತಿಗೆ ಶ್ರಮಿಸುತ್ತಿದ್ದಾರೆ. ಇಂತಹ ಕಾರ್ಯವನ್ನು ಮಾಡುತ್ತಿರುವ ಮಠ ಮಾನ್ಯಗಳಿಗೆ ಬಿಜೆಪಿ ಸರ್ಕಾರ ಅನುದಾನ ನೀಡುತ್ತಿರುವುದು ಅಭಿನಂದನಾರ್ಹ’ ಎಂದರು.

ADVERTISEMENT

ಶಾಸಕ ಪಿ.ರಾಜೀವ ಮಾತನಾಡಿ, ‘ಫೆಬ್ರುವರಿಯಲ್ಲಿ ನಡೆಯುವ ಗುರುವಂದನಾ ಕಾರ್ಯಕ್ರಮಕ್ಕೆ ಹಂದಿಗುಂದ ಗ್ರಾಮದಲ್ಲಿ ಹಸಿರೀಕರಣ, ವನಮಹೋತ್ಸವ, ಶೌಚಾಲಯಗಳ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಕಂಕಣ ಬದ್ಧರಾಗಿ ಕೆಲಸ ಮಾಡೋಣ’ ಎಂದು ಹೇಳಿದರು.

ಶ್ರೀಗಳು ಹಾಗೂ ಗಣ್ಯರು ಸಮಾಜದ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿದರು.

ಹಂದಿಗುಂದದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ, ಬೆಲ್ಲದಬಾಗೇವಾಡಿಯ ಶಿವಾನಂದ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಚಿಮ್ಮಡದ ವಿರಕ್ತಮಠದ ಪ್ರಭು ಸ್ವಾಮೀಜಿ, ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ, ಶೇಗುಣಸಿ ಮಹಾಂತ ದೇವರು, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ತೇಲಿ, ಮಲ್ಲಿಕಾರ್ಜುನ ಖಾನಗೌಡ, ರಾಮನಗೌಡ ಪಾಟೀಲ, ಪ್ರಗತಿಪರ ರೈತ ಬನಪ್ಪ ತೇಲಿ, ಗ್ರಾ.ಪಂ. ಅಧ್ಯಕ್ಷ ಶ್ರೀಶೈಲ ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.